Friday, August 28, 2020

ಹಯಾತ್ತುಲ್ ಮುಹ್'ಮೀನಿನ್ ಔಲಿಯಾ, ಕಣ್ಣೂರು ಸಿಟಿ ಮಖಾಂ, ಕಣ್ಣೂರು ಜಿಲ್ಲೆ

#ಝಿಯಾರತ್ತ್_ಕೇಂದ್ರ​​​
🔖🔖 8️⃣9️⃣ 🔖🔖
➖➖➖➖➖➖➖
#ಹಯಾತ್ತುಲ್ ಮುಅ್‌ಮಿನೀನ್ (ಖ.ಸಿ) ಕಣ್ಣೂರು ಸಿಟಿ ಮಖಾಂ, ಕಣ್ಣೂರು ಜಿಲ್ಲೆ.*
➖➖➖➖➖➖➖➖
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
☪☪☪☪☪☪☪☪☪

✍ ಗಫೂರ್ ಬಾಯಾರ್
*********************

ಕಣ್ಣೂರು ಸಿಟಿಯಲ್ಲಿ ಅಂತ್ಯ ವಿಶ್ರಮ ಪಡೆಯುತ್ತಿರುವ ಮೌಲಲ್ ಬುಖಾರಿ ತಂಙಳ್ (ರ) ಇಚ್ಚ ಮಸ್ತಾನ್ (ರ) ಮತ್ತು ಇಬ್ರಾಹಿಂ ಸಕ್ರಾನ್ (ರ) ಎಂಬ ಸೂಫಿವರ್ಯರ ಮಖಾಮಿನ ವೈಶಿಷ್ಟ್ಯಗಳ ಬಗ್ಗೆ ಹಿಂದೆ ನಾನು ಬರೆದಿದ್ದೆ. ಆ ಮಹಾನರುಗಳ ಮಖ್ಬರದ ಸನಿಹದಲ್ಲೇ ಅಂತ್ಯ ವಿಶ್ರಮ ಪಡೆಯುತ್ತಿರುವ ಮತ್ತೋರ್ವ ಸೂಫಿವರ್ಯರಾಗಿದ್ದಾರೆ ಹಯಾತುಲ್ ಮುಅ್‌ಮಿನೀನ್ (ಖ.ಸಿ).

ಅಸಾಮಾನ್ಯ ವಿದ್ವಾಂಸರೂ ಪ್ರಮುಖ ಸೂಫಿವರ್ಯರೂ ಅಲ್ಲಾಹನ ಇಷ್ಟದಾಸರೂ ಆಗಿದ್ದ ಹಯಾತುಲ್ ಮುಅ್‌ಮಿನೀನ್ (ಖ.ಸಿ)ರವರು ನೊಂದ ಜನಸಾಮಾನ್ಯರಿಗೆ ಸಾಂತ್ವಾನ ನೀಡುವ ಸಂಜೀವಿನಿ ಎನಿಸಿದ್ದರಲ್ಲದೆ ತಮ್ಮ ಜೀವಿತ ಕಾಲದಲ್ಲೇ ಅಸಾಮಾನ್ಯವಾದ ಕರಾಮತ್ತೊಂದನ್ನು ಕಾಣಿಸಿ ವಿಸ್ಮಯ ಮೂಡಿಸಿದವರು.

ಮಹಾನರು ಒಮ್ಮೆ ತಮ್ಮ ಶಿಷ್ಯರೊಂದಿಗೆ, ಈ ಜನಜಂಗುಳಿಯ ನಡುವೆ ಇಲಾಹಿ ಸ್ಮರಣೆಗೆ ಭಂಗವುಂಟಾಗುತ್ತಿದೆ  ಹಾಗಾಗಿ ನಾನು ಖಬರಿನೊಳಗೆ ಹೋಗುತ್ತೇನೆ. ನಲವತ್ತನೇ ದಿನ ನನ್ನ ಖಬರನ್ನು ತೆರೆಯಿರಿ ಎಂದು ಹೇಳಿ ಖುರ್ಆನನ್ನು ಹಿಡಿದುಕೊಂಡು ಮೊದಲೇ ಅಗೆದಿಟ್ಟಿದ್ದ ಖಬರಿನೊಳಗೆ ಇಳಿದು ಶಿಷ್ಯರೊಂದಿಗೆ ಖಬರನ್ನು ಮುಚ್ಚಿಸಿದರು.

ಮಹಾನರು ಹೇಳಿದಂತೆ ನಲವತ್ತನೇ ದಿನ ಶಿಷ್ಯರು ತಮ್ಮ ಉಸ್ತಾದರ ಖಬರನ್ನು ತೆರೆದು ನೋಡಿದಾಗ ಆಶ್ಚರ್ಯಚಕಿತರಾಗಿದ್ದರು. ಕಾರಣ ಖಬರಿನೊಳಗೆ ಮಹಾನರು ಖುರ್ಆನ್ ಓದುತ್ತಿದ್ದರು.

ಹಾಗೆ ಶಿಷ್ಯರು ಖಬರನ್ನು ತೆರೆದಾಗ ಖಬರಿನೊಳಗಿನಿಂದಲೇ, "ನಾನಿನ್ನು ಇಹಲೋಕಕ್ಕೆ ಬರಲಾರೆ ಹಾಗಾಗಿ ಖಬರನ್ನು ಮುಚ್ಚಿಬಿಡಿ" ಎಂದರು. ಉಸ್ತಾದರ ಮಾತಿನಂತೆ ಶಿಷ್ಯರು ಖಬರನ್ನು ಶಾಶ್ವತವಾಗಿ ಮುಚ್ಚಿ ಬಿಟ್ಟರು. ಈ ಕಾರಣದಿಂದ ಈ ಮಹಾನರಿಗೆ ಹಯಾತುಲ್ ಮುಅ್‌ಮಿನೀನ್ ಎಂಬ ಹೆಸರು ಬಂತು.

ಮಹಾನರ ಕರಾಮತ್ತಿನ ಅರಿವಿರುವ ಜನಸಾಮಾನ್ಯರು ಜಾತಿ ಮತಬೇಧವಿಲ್ಲದೆ ಇಲ್ಲಿಗೆ ಝಿಯಾರತ್ತಿಗಾಗಿ ಆಗಮಿಸುತ್ತಾರೆ.
🔹🔹🔹🔹🔹🔹🔹

ಶಹೀದ್ ಮಾಹಿನ್ ಪೊಕರ್ (ಖ:ಸಿ) ಝಿಯಾರತ್ತುಂಗರ, ಮಾಂಬ, ಚಕ್ಕರಕ್ಕಲ್, ಕಣ್ಣೂರು ಜಿಲ್ಲೆ.

*ಝಿಯಾರತ್ತ್ ಕೇಂದ್ರ​​​*
♦️♦️ 8️⃣8️⃣ ♦️♦️
➖➖➖➖➖➖➖
#ವಲಿಯುಲ್ಲಾಹಿ_ಮಾಹಿನ್_ಪೋಕರ್  (ಖ:ಸಿ) ಝಿಯಾರತ್ತುಂಗರ ಪಳ್ಳಿ, ಮಾಂಬ ಚಕ್ಕರಕ್ಕಲ್ ಕಣ್ಣೂರ್ ಜಿಲ್ಲೆ.
➖➖➖➖➖➖➖➖
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
☪☪☪☪☪☪☪☪☪

✍ ಗಫೂರ್ ಬಾಯಾರ್
▪️▪️▪️▪️▪️▪️▪️

ಕೇರಳದ ಕಣ್ಣೂರಿನಿಂದ 18 ಕಿಲೋಮೀಟರ್ ದೂರವಿರುವ ಕಿಯಾಕ್‌ ಮುಯಪ್ಪಾಲ‌ ಬಝಾರಿನಿಂದ ಅರ್ಧ ಕಿಲೋಮೀಟರ್ ದೂರದಲ್ಲಿರುವ ಮಾಂಬ ಎಂಬ ಸ್ಥಳದಲ್ಲಿರುವ ಝಿಯಾರತ್ತುಂಗರ ಜುಮಾ ಮಸೀದಿಯ ಕಾಂಪೌಂಡಿನೊಳಗಿರುವ ದರ್ಗಾ ಶರೀಫ್ ಸರ್ವ ಧರ್ಮಿಯರ ಅಭಯ ಕೇಂದ್ರವಾಗಿದೆ.

ಹಲವಾರು ಕಶ್ಫ್ ಕರಾಮತ್ತುಗಳನ್ನು ಕಾಣಿಸಿರುವ ಮಾಹಿನ್ ಪೋಕರ್ ಶಹೀದ್ (ರ) ಎಂಬ ಮಹಾನರ ದರ್ಗಾ ಶರೀಫ್ ಇದಾಗಿದ್ದು ಈ ಮಹಾನರ ಮಖಾಮಿನ ಸನಿಹದಲ್ಲೇ ಅವರ ಶಿಷ್ಯಂದಿರೂ ಹಾಗೂ ಶುಹದಾಗಳೂ (ಹುತಾತ್ಮ) ಆದ ಸಿರಾಜುದ್ದೀನ್ (ರ) ಮತ್ತು ಅಬ್ದುಲ್ಲ (ರ) ಎಂಬ ಮಹಾನರಿಬ್ಬರೂ ಅಂತ್ಯ ವಿಶ್ರಮ ಪಡೆಯುತ್ತಿದ್ದಾರೆ.

ಕಣ್ಣೂರು ಪೊನ್ನಿಲಗತ್ತ್ ಎಂಬ ಮನೆತನದಲ್ಲಿ ತಾಯಿ ತಂದೆಯರಿಗೆ ಏಕೈಕ ಪುತ್ರನಾಗಿ ಜನಿಸಿದ ವಲಿಯುಲ್ಲಾಹಿ ಮಾಹಿನ್ ಪೋಕರ್ (ರ) ರವರು ಸರ್ವ ಧರ್ಮೀಯರನ್ನು ಬಹಳ ಗೌರವದಿಂದ ಕಾಣುತ್ತಾ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದರು.

ಬಾಲ್ಯದಿಂದಲೇ ಇಲಾಹಿ ಸ್ಮರಣೆಯನ್ನು ಮೈಗೂಡಿಸಿಕೊಂಡಿದ್ದ ಅವರು ಅಧ್ಯಯನಕ್ಕೆ ಹೆಚ್ಚಿನ ಒತ್ತು ಕೊಡುತ್ತಿದ್ದರಲ್ಲದೆ ಸದಾ ಆರಾಧನೆಯಲ್ಲಿ ತಲ್ಲೀನರಾಗಿರುತ್ತಿದ್ದರು. ಶರೀಅತ್ ನಿಯಮದ ಪ್ರಕಾರ ಪ್ರಾಯ ಪೂರ್ತಿಯಾಗುತ್ತಿದ್ದಂತೆಯೇ ಅಲ್ಲಾಹನ ಇಷ್ಟ ದಾಸರಾದ ಔಲಿಯಾ ಎಂಬ ಪದವಿ ಪಡೆದಿದ್ದರು.

ಬ್ರಿಟೀಷರಿಗಿಂತಲೂ ಬಹಳ ಮುನ್ನವೇ ವ್ಯಾಪಾರ ನಿಮಿತ್ತ ಭಾರತಕ್ಕೆ ಬಂದಿದ್ದ ಪೋರ್ಚುಗೀಸರು ನಿಧಾನವಾಗಿ ಭಾರತವನ್ನು ತಮ್ಮ ವಶಕ್ಕೆ ತೆಗೆದು ಕೊಂಡರಲ್ಲದೆ ಭಾರತೀಯರನ್ನು ಅಪಮಾನಕರವಾಗಿ ನಡೆಸಿಕೊಳ್ಳಲಾರಂಭಿಸಿದ್ದರು. ಇದನ್ನು ಕಂಡು ಸಿಡಿದೆದ್ದ ಮಾಹಿನ್ ಪೋಕರ್ (ರ) ಪೋರ್ಚುಗೀಸರ ವಿರುದ್ಧ ಹೋರಾಟಕ್ಕಿಳಿದಿದ್ದರು.

ತಾಯಿನಾಡಿನ ಉಳಿವಿಗಾಗಿ ಪರಕೀಯರ ವಿರುದ್ಧ ಹೋರಾಟಕ್ಕಿಳಿದಿದ್ದ ಮಾಹಿನ್ ಪೋಕರ್ (ರ)ರವರು ಹದಿನಾರನೇ ವಯಸ್ಸಿನಲ್ಲಿ ಚೊರಯಾನ್ ಕುಂಡ್ ಎಂಬಲ್ಲಿ ಪೋರ್ಚುಗೀಸರ ವಿರುದ್ಧದ ಹೋರಾಟವೊಂದರಲ್ಲಿ ಶಹೀದಾದರು.

ಹಾಗೆ ಶಹೀದಾದ ಮಹಾನರ ಗೌರವಾರ್ಥ ಅವರ ಜನಾಝದ ಅಂತ್ಯಕ್ರಿಯೆಗಾಗಿ ಅಂದಿನ ನಾಡದೊರೆ ಕೊಕುರಚ್ಚನ್ ಎಂಬುವರು ಮಾಂಬ ಎಂಬ ಊರಿನಲ್ಲಿ ದಾನವಾಗಿ ನೀಡಿದ ಸ್ಥಳದಲ್ಲಿ ದಫನ ಮಾಡಲಾಯಿತು. 
ಶಹೀದಾದ ಮಾಹಿನ್ ಪೋಕರ್ (ರ)ರವರು ಜನಿಸಿದ ಮನೆತನವು ನಂತರ *"ಶಹೀದೊರಕಂ"* ಎಂಬ ಗೌರವನಾಮದಿಂದ ಪ್ರಸಿದ್ಧಿ ಪಡೆಯಿತು.

ಮಹಾನರ ಮಖಾಮಿನ ಕೆಳಭಾಗದಲ್ಲಿ ಅವರ ಶಿಷ್ಯಂದಿರೂ, ಹುತಾತ್ಮರೂ ಆದ ಸಿರಾಜುದ್ದೀನ್ (ರ) ಮತ್ತು ಅಬ್ದುಲ್ಲ (ರ) ಎಂಬಿಬ್ಬರು ಮಹಾನರೂ ಅಂತ್ಯ ವಿಶ್ರಮ ಪಡೆಯುತ್ತಿದ್ದಾರೆ.
🔖🔖🔖🔖🔖🔖🔖🔖

ವಲಿಯುಲ್ಲಾಹಿ ಪಾಲೊಟ್ಟ್ ಮೂಸ ಕುಟ್ಟಿ ಹಾಜಿ (ನ:ಮ) ಕಣ್ಣೂರು ಸಿಟಿ, ಕಣ್ಣೂರು ಜಿಲ್ಲೆ

*ಝಿಯಾರತ್ತ್ ಕೇಂದ್ರ​​​*
       🕎 8️⃣7️⃣ 🕎
➖➖➖➖➖➖➖
#ವಲಿಯುಲ್ಲಾಹಿ ಪಾಲೊಟ್ಟ್ ಮೂಸ ಕುಟ್ಟಿ ಹಾಜಿ (ಖ:ಸಿ) ಕಣ್ಣೂರು ಸಿಟಿ ಕಣ್ಣೂರು ಜಿಲ್ಲೆ*
➖➖➖➖➖➖➖➖
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
☪☪☪☪☪☪☪☪☪

✍ ಗಫೂರ್ ಬಾಯಾರ್
*********************

ಅಹ್ಲ್ ಸುನ್ನತ್ ವಲ್ ಜಮಾಅತಿನ ಪ್ರಬಲ ಪ್ರತಿಪಾದಕರೂ ಖಾದಿಯಾನಿ, ವಹ್ಹಾಬಿ ಮುಂತಾದ ನೂತನವಾದಿಗಳ ದುರ್ವ್ಯಾಖ್ಯಾನಗಳಿಗೆ ಪುರಾವೆ ಸಹಿತ ಸಮರ್ಪಕವಾದ ಉತ್ತರ ನೀಡುತ್ತಿದ್ದ ಅಸಾಮಾನ್ಯ ವಿದ್ವಾಂಸರಲ್ಲೊಬ್ಬರಾಗಿದ್ದಾರೆ ವಲಿಯುಲ್ಲಾಹಿ ಪಾಲೋಟ್ಟ್ ಮೂಸ ಕುಟ್ಟಿ ಹಾಜಿ (ರ).

ಕುಂಞಾಹಮದ್ ಎಂಬುವವರ ಪುತ್ರರಾದ ಅವರು 1878ರಲ್ಲಿ ಜನಿಸಿದರು. ವಿವಿಧ ವಿದ್ವಾಂಸರ ಬಳಿ ಜ್ಞಾನಾರ್ಜನೆ ಮಾಡಿದ ನಂತರ ಅಂದರೆ 1912-15ರ ರ ನಡುವೆ ಮಕ್ಕಾ ಮತ್ತು ಮದೀನಾಕ್ಕೆ ತೆರಳಿ ಮದೀನಾದ ಮುಫ್ತಿಯೂ ಆಗಿದ್ದ  ಅಲ್ಲಾಮ ಯೂಸುಫುನ್ನಬಹಾನಿ (ರ) ರಂತಹ ಹೆಸರಾಂತ ವಿದ್ವಾಂಸರಿಂದ ಉನ್ನತ ಶಿಕ್ಷಣ ಗಳಿಸಿದರು. ಈ ಸಮಯದಲ್ಲಿ ಎರಡು ಸಲ ಹಜ್ಜ್ ಕರ್ಮವೂ ನಿರ್ವಹಿಸಿದರು.

ಅನಂತರ ತಾಯಿನಾಡಿಗೆ ಹಿಂದಿರುಗಿದ ಅವರು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು.

ಧಾರ್ಮಿಕ ರಂಗಕ್ಕೆ ಅತ್ಯಮೂಲ್ಯವಾದ ಕೊಡುಗೆ ನೀಡಿರುವ ಅವರು 1930ರಲ್ಲಿ ದೆಹಲಿಯಲ್ಲಿ ನಡೆದ ಆಲ್ ಇಂಡಿಯಾ ಸುನ್ನಿ ಜಂಇಯ್ಯತ್ತುಲ್ ಉಲಮಾ ಕಾನ್ಫರೆನ್ಸ್ ನಲ್ಲಿ ಕೇರಳ ವಿದ್ವಾಂಸರ ಪ್ರತಿನಿಧಿಯಾಗಿ ಭಾಗವಹಿಸಿದ್ದರು.

1934ರ ನವೆಂಬರ್ 14ರಂದು ಕೇರಳ ಸುನ್ನಿ ಜಂಇಯ್ಯತ್ತುಲ್ ಉಲಮಾ ರೂಪೀಕರಣವಾದಾಗ ಮೂಸಾ ಕುಟ್ಟಿ ಹಾಜಿ (ಖ.ಸಿ)ರವರು ಅದರ ಮುಂಚೂಣಿ ನಾಯಕರಲ್ಲಿ ಒಬ್ಬರಾಗಿದ್ದರಲ್ಲದೆ ಪ್ರಥಮ ಮುಶಾವರದ ಸದಸ್ಯರೂ ಆಗಿದ್ದರು.

ಇಸ್ಲಾಮಿನ ಆಶಯ, ಆದರ್ಶ ಮತ್ತು ಪವಿತ್ರ ಸಂದೇಶಗಳನ್ನು ಮನಬಂದಂತೆ ತಿರುಚಿ ವ್ಯಾಖ್ಯಾನಿಸುತ್ತಿದ್ದ ಖಾದಿಯಾನಿ, ಚಲಫಿ ಮುಂತಾದ ನೂತನವಾದಿಗಳ ದುರ್ವ್ಯಾಖ್ಯಾನಗಳ ವಿರುದ್ಧ  ಮೂಸ ಕುಟ್ಟಿ ಹಾಜಿ (ಖ.ಸಿ)ಯವರು ಸಮರವನ್ನೇ ಸಾರಿದ್ದರಿಂದ ಕಂಗೆಟ್ಟಿದ್ದ  ನೂತನವಾದಿಗಳು‌ ಫಸ್ಖ್‌ಗೆ ಸಂಬಂಧಿಸಿದ ವಿಷಯದಲ್ಲಿ ಖಾದಿಯಾನಿ ಪರ ವಕೀಲ ಸಫರುಲ್ಲಾ ಖಾನ್ ಖಾದಿಯಾನಿಯ ಮುಂದಾಳತ್ವದಲ್ಲಿ ಅಂದಿನ ಮದ್ರಾಸ್ ಹೈಕೋರ್ಟಿನಲ್ಲಿ ಹಾಜಿಯ ವಿರುದ್ಧ ಮೊಕದ್ದಮೆ ಹೂಡಿದರು. (ದೇಶ ವಿಭಜನೆಯ ನಂತರ ಈ ಸಫರುಲ್ಲಾ ಖಾನ್ ಪಾಕಿಸ್ತಾನದ ಕಾನೂನು ಮಂತ್ರಿಯಾಗಿದ್ದರು) ತಮ್ಮ ವಾದಕ್ಕೆ ಸೂಕ್ತ ಪುರಾವೆ ಒದಗಿಸಿದ ಹಾಜಿಯವರ ಪರ ಕೋರ್ಟ್ ತೀರ್ಪು ನೀಡಿತ್ತು. ಹಾಜಿಯವರ ಪರ ಪೋಕರ್ ಸಾಹಿಬ್ ಮತ್ತು ಕೆ.ಸಿ ಕೇಶವ ಮೆನೊನ್ ವಾದ ಮಂಡಿಸಿದ್ದರು.

1951ರಲ್ಲಿ ತಮ್ಮ ಶಿಷ್ಯರೊಬ್ಬರೊಂದಿಗೆ ನೂತನವಾದದ ಬಗ್ಗೆ ಚರ್ಚಿಸುತ್ತಿರುವಾಗ, "ಮೌದೂದಿ ಅಥವಾ ಖಾದಿಯಾನಿಗಳ ದುರ್ವ್ಯಾಖ್ಯಾನದ ವಿರುದ್ಧ ಸುನ್ನಿ ವಿದ್ವಾಂಸರು ಆಧಾರ ಸಹಿತ ಪುರಾವೆಯೊಂದಿಗೆ ಸಂವಾದ ನಡೆಸಿ ಅವರ ವಾದಗಳನ್ನು  ಸುಳ್ಳೆಂದು ಸಾಬೀತು ಪಡಿಸುತ್ತಿದ್ದರೂ ಖಾದಿಯಾನಿ ಅನುಯಾಯಿಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ ಏಕಿರಬಹುದು ಎಂದು ಮೂಸಾ ಕುಟ್ಟಿ ಹಾಜಿ (ಖ:ಸಿ)ಯವರು ಕೇಳಿದರು, ಆಗ ಆ ಶಿಷ್ಯ ವಿನಯದಿಂದಲೇ ನನಗೆ ಅಷ್ಟೊಂದು ತಿಳುವಳಿಕೆ ಇಲ್ಲದಿರುವುದರಿಂದ ಇದರ ಉತ್ತರವನ್ನು ತಾವೇ ವಿವರಿಸಬೇಕು ಎಂದರು.

ಶಿಷ್ಯನ ಮಾತು ಕೇಳಿದ ಹಾಜಿ (ಖ:ಸಿ)ಯವರು ಅದಕ್ಕೆ ಸುದೀರ್ಘವಾದ ವಿಶ್ಲೇಷಣಾತ್ಮಕವಾದ ಉತ್ತರ ನೀಡಿದರು.

ಆ ವಿಶ್ಲೇಷಣಾತ್ಮಕವಾದ ಉತ್ತರ ಹೀಗಿತ್ತು...

*"ಮುಸ್ಲಿಮರಾದ ನಾವು, ಐದು ಹೊತ್ತಿನ ನಮಾಜ್ ನಿರ್ವಹಿಸುವುದರ ಜೊತೆಗೆ ರಮಳಾನ್ ಮಾಸದಲ್ಲಿ ವ್ರತಾಚರಿಸಿ ಝಕಾತ್ ಕೊಡುವುದು ಸೇರಿದಂತೆ ಎಲ್ಲಾ ಕಡ್ಡಾಯ ಕರ್ಮಗಳನ್ನೂ ಚಾಚೂತಪ್ಪದೆ ಪಾಲಿಸುತ್ತೇವೆ. ಆದರೆ ನಮ್ಮ ಈ ಸತ್ಕರ್ಮಗಳನ್ನು ಪೂರ್ವಜರಾದ ಸ್ವಹಾಬಾಗಳು, ತಾಬಿಊಗಳು, ತಬವುತ್ತಾಬಿಊಗಳು ಮತ್ತು ಇಮಾಮರುಗಳ ಸತ್ಕರ್ಮಗಳಿಗೆ ಹೋಲಿಸಿದರೆ ನಮ್ಮ ಸತ್ಕರ್ಮಗಳು ಏನೂ ಅಲ್ಲ. ಆದ್ದರಿಂದ ಅಲ್ಲಾಹನಿಂದ ಅವರಿಗೆ ಲಭಿಸಿದ  ಪದವಿ, ಪುರಸ್ಕಾರ ಮತ್ತು ಸ್ಥಾನಮಾನಗಳನ್ನು ನಾವು ಪಡೆಯುವುದಿರಲಿ ಅದರ ಸಮೀಪಕ್ಕೂ ಸುಳಿಯಲು ನಮ್ಮಿಂದ ಸಾಧ್ಯವಿಲ್ಲ. ಏಕೆಂದರೆ ನಮ್ಮ ಇಬಾದತ್‌ಗಳಲ್ಲಿ ಅಷ್ಟೊಂದು ಲೋಪಗಳಿರಬಹುದು."*

*ಹಾಗಾಗಿ ನಾವು ಅಲ್ಲಾಹನ ಕೋಪಕ್ಕೆ ತುತ್ತಾಗದೆ ನರಕದಿಂದ ವಿಮುಕ್ತಿ ಪಡೆಯಲು ನಮಗೊಂದು  ಮಾರ್ಗವಿದೆ.*

*ಅದೇನೆಂದರೆ ನಬಿ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರು, ಮತ್ತು ಅವರನ್ನು ಅನುಸರಿಸಿದ ಸ್ವಹಾಬಿಗಳು ಸ್ವಹಾಬಿಗಳನ್ನು ಅನುಸರಿಸಿದ ತಾಬಿಉಗಳು, ತಾಬಿಉಗಳನ್ನು ಅನುಸರಿಸಿದ ತಬ‌ಉತ್ತಾಬಿಊಗಳು ಮತ್ತು ತಬ‌ಉತ್ತಾಬಿಊಗಳನ್ನು ಅನುಸರಿಸಿದ ಇಮಾಮರುಗಳು ತೋರಿಸಿದ ಹಿದಾಯತ್ ಎಂಬ ಸನ್ಮಾರ್ಗದಲ್ಲಿ ನಾವು ಸಾಗುವುದರ ಜೊತೆಗೆ ಆ ಸನ್ಮಾರ್ಗದ ಸಂದೇಶವನ್ನು ದುರ್ವ್ಯಾಖ್ಯಾನ ಮಾಡಿ ಮುಗ್ಧ ಜನಸಾಮಾನ್ಯರನ್ನು ದಾರಿ ತಪ್ಪಿಸಲು ಯತ್ನಿಸುವವರನ್ನು ತಿದ್ದಲು ಪ್ರಯತ್ನಿಸುವುದು. ಅದಾಗದಿದ್ದರೆ, ಅಂಥವರ ದುರ್ವ್ಯಾಖ್ಯಾನವನ್ನು ಹೇಗೆಲ್ಲಾ ತಡೆಯಬಹುದೋ ಆ ರೀತಿಯಲ್ಲೆಲ್ಲ ತಡೆಯಲು ಪ್ರಯತ್ನಿಸಬೇಕು ಈ ಕಾರ್ಯವನ್ನು ಒಂದು ಇಬಾದತ್ (ಸತ್ಕರ್ಮ) ಎಂಬ ಭಾವನೆಯಿಂದ ಕಾಣುವುದು.* 

*ಲೌಕಿಕ ಲಾಭದ ದುರುದ್ದೇಶವಿಲ್ಲದೆ ಇಂತಹ ಸತ್ಕರ್ಮವನ್ನು ಕೈಗೊಂಡರೆ ಆ ಕಾರಣದಿಂದ ನಮ್ಮ ಇತರ ಸತ್ಕರ್ಮಗಳಲ್ಲಿ ಸಂಭವಿಸಿರಬಹುದಾದ ಲೋಪದೋಷಗಳನ್ನು ಅಲ್ಲಾಹನು ಕ್ಷಮಿಸಿ ನಮ್ಮ ಸತ್ಕರ್ಮಗಳನ್ನು ಸ್ವೀಕರಿಸಬಹುದು. ಹಾಗಾದಾಗ ನಬಿ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರೊಂದಿಗೆ ಸ್ವಹಾಬಿಗಳು ಮತ್ತು ಅವರನ್ನು ಅನುಸರಿಸಿದವರು ಪ್ರವೇಶಿಸುವ ಸ್ವರ್ಗಕ್ಕೆ ನಮಗೂ ಪ್ರವೇಶ ಲಭಿಸುವ ಸಾಧ್ಯತೆ ಇದೆ.*

*ಅದಕ್ಕಾಗಿ ಕರುಣಾನಿಧಿಯಾದ ಅಲ್ಲಾಹನು ನಮ್ಮಂತಹ ಸಾಮಾನ್ಯರ ನೆರವಿಗಾಗಿ ಇಂತಹ ನೂತನವಾದಿಗಳನ್ನು (ಮುಬ್‌ತದಿಉಗಳನ್ನು) ಇಲ್ಲಿ ನೆಲೆಗೊಳಿಸಿರುವನೆನ್ನುವುದು ನಮ್ಮ ಗಮನದಲ್ಲಿರಬೇಕು.*

*ಆದ್ದರಿಂದ ಇಸ್ಲಾಮಿನ ಕಡ್ಡಾಯ ಕರ್ಮಗಳಾದ ನಮಾಜ್ ಉಪವಾಸ ಮುಂತಾದ ಇಬಾದತ್‌ಗಳಂತೆಯೇ ಮುಬ್‌ತದಿವುಗಳ ದುರ್ವ್ಯಾಖ್ಯಾನಗಳ ವಿರುದ್ಧ ಸೈದ್ಧಾಂತಿಕ ಹೋರಾಟ ನಡೆಸಬೇಕು. ಆದರೆ ನಮ್ಮ ಈ ಸೈದ್ಧಾಂತಿಕ ಹೋರಾಟವು ಹಣ, ಕೀರ್ತಿ ಅಥವಾ ಸ್ಥಾನಮಾನಗಳಿಗಾಗಿ ಆಗಿರಬಾರದು.*

*ಈ ಸೈದಾಂತಿಕ ಹೋರಾಟದ ಹಿಂದೆ ಅಂತಹ ಸ್ವಾರ್ಥವೇನಾದರೂ ಇದ್ದರೆ ಇಹಲೋಕದಲ್ಲಿ ಮಾತ್ರವಲ್ಲ ಪರಲೋಕದಲ್ಲೂ ಅದರ ಪ್ರತಿಫಲವನ್ನು ಉಣ್ಣಬೇಕಾದೀತು ಎಂದರು.*

"ಆಧುನಿಕ ಕಾಲಘಟ್ಟದಲ್ಲಿ ಹೆಜ್ಜೆಗೊಂದು ಮುಬ್‌ತದಿವುಗಳು ಹುಟ್ಟಿಕೊಂಡು ದಿನಕ್ಕೊಂದು ಸಿದ್ದಾಂತವನ್ನು ಪ್ರತಿಪಾದಿಸುತ್ತಿರುವುದನ್ನು ಕಾಣುವಾಗ ಏಳು ದಶಕಗಳ ಹಿಂದೆ ಮೂಸಾ ಕುಟ್ಟಿ ಹಾಜಿ (ಖ.ಸಿ)ರವರು  ಸಂದೇಶವನ್ನು ನಾವೆಲ್ಲರೂ ಮನನ ಮಾಡಬೇಕಾದ ಅನಿವಾರ್ಯತೆಯಿದೆ."

ಭೌತಿಕ ಪ್ರತಿಫಲಾಪೇಕ್ಷೆ ಇಲ್ಲದೆ ದೀನೀ ಸೇವೆ ಮಾಡುತ್ತಿದ್ದ ಅವರು ಕಣ್ಣೂರಿನ ಕಾಂಬಝಾರಿನಲ್ಲಿ ಇಸ್ಲಾಮಿಕ್ ಗ್ರಂಥಗಳು, ಸುಗಂಧ ದ್ರವ್ಯ, ಸುರುಮ, ಟೊಪ್ಪಿ, ಮಿಸ್ವಾಕ್, ತಸ್'ಬಿಹ್ ಮಾಲೆ ಇತ್ಯಾದಿಗಳ ಮಾರಾಟದ *"ತಾಜಿರತ್ತುಲ್ ಕುತುಬಿ ವಿಲ್ ಅತ್ತರ್"* ಎಂಬ ಹೆಸರಿನ ತಮ್ಮ ಅಂಗಡಿಯ ಆದಾಯದಿಂದ ತಮ್ಮ ಕುಟುಂಬದ ದೈನಂದಿನ ಜೀವನಕ್ಕೆ ಅಗತ್ಯವಿರುವಷ್ಟನ್ನು ಮಾತ್ರ ಉಳಿಸಿ ಮಿಕ್ಕಿದ್ದೆಲ್ಲವನ್ನೂ ದೀನೀ ಸೇವೆಗೆ ವ್ಯಯಿಸುತ್ತಿದ್ದರು. ಈ ಅಂಗಡಿ ಮಾತ್ರವಲ್ಲದೆ ರಮಳಾನ್‌ನಲ್ಲಿ ರಾತ್ರಿ ಮಾತ್ರ ತೆರೆಯುತ್ತಿದ್ದ ಒಂದು ಹೋಟೆಲ್ ಸಹ ಮಹಾನವರ  ಮಾಲಿಕತ್ವದಲ್ಲಿತ್ತು.

ಮಿಂಞಂತ ಎಂಬಲ್ಲಿ ನಡೆದ ಸಮಸ್ತ ಸಮ್ಮೇಳನವು ಖುತುಬಾ ಪರಿಭಾಷೆಯ ವಿರುದ್ಧ ವಿಧೇಯಕವನ್ನು ಅಂಗೀಕರಿಸಿ ಫತ್ವಾ ಹೊರಡಿಸಿದ್ದರೂ ಮಹಾನರ ಮನೆಯ ಸಮೀಪದಲ್ಲೇ ಇದ್ದ ಕಣ್ಣೂರು ಸಿಟಿ ಜುಮಾ ಮಸೀದಿಯು ಅದನ್ನು ಪಾಲಿಸಿರಲಿಲ್ಲ. ಹಾಗಾಗಿ ಜುಮಾ ನಮಾಝಿಗಾಗಿ ದೂರದ ವಳಪಟ್ಟಣ ಎಂಬಲ್ಲಿರುವ ಮಸೀದಿಗೆ ಕಾಲ್ನಡಿಗೆಯಲ್ಲೇ ಹೋಗುತ್ತಿದ್ದರು. ಉಳಿದ ದಿನಗಳಲ್ಲಿ ಕಣ್ಣೂರು ಸಿಟಿ ಮಸೀದಿಯಲ್ಲಿ ನಮಾಜ್ ನಿರ್ವಹಿಸುತ್ತಿದ್ದ ಅವರು ಲುಹರ್ ನಮಾಜಿನ ಬಳಿಕ ಹದೀಸ್ ತರಗತಿ ನಡೆಸುತ್ತಿದ್ದರು.

ಕೆಲವರ್ಷಗಳ ಹಿಂದೆ ವಿಧಿವಶರಾದ ಸೂಫಿವರ್ಯರಾದ ನೂರುಲ್ ಉಲಮಾ ಎಂ.ಎ ಉಸ್ತಾದ (ಖ:ಸಿ)ರಿಗೆ ಮೂಸಾ ಕುಟ್ಟಿ ಹಾಜಿ (ಖ.ಸಿ) ರವರು ಮಾರ್ಗದರ್ಶಕರಾಗಿದ್ದರು.

ಮಲಯಾಳಂ, ಅರೇಬಿಕ್ ಮಾತ್ರವಲ್ಲದೆ ಉರ್ದು ಭಾಷೆಯಲ್ಲೂ ಹಿಡಿತ ಹೊಂದಿದ್ದ ಅವರು, ಖಾದಿಯಾನಿ, ಸಲಫಿ, ಮೌದೂದಿ, ಮುಂತಾದ ನೂತನವಾದಿಗಳ ದುರ್ವ್ಯಾಖ್ಯಾನಗಳಿಗೆ ಪುರಾವೆ ಸಹಿತ ದಿಟ್ಟ ಉತ್ತರ ನೀಡುತ್ತಿದ್ದ ಕಾರಣ ನೂತನವಾದಿಗಳು ಅದೆಷ್ಟೇ ಕಿರುಕುಳ ನೀಡಿದರೂ ಸಹ ಒಂದಿಂಚು ಹಿಂದೆ ಸರಿಯದೆ ಸುನ್ನತ್ ಜಮಾಅತಿನ ಆಶಯ ಮತ್ತು ಆದರ್ಶಗಳ ಪ್ರಬಲ ಪ್ರತಿಪಾದಕರಾಗಿ 75 ವರ್ಷಗಳ ಕಾಲ ಸಂತೃಪ್ತ ಜೀವನ ನಡೆಸಿ 1953ರ ಜುಲೈ 14 ರಂದು (ಹಿಜರಿ 1272 ದುಲ್‌ಖ‌ಅದ್ 2) ಕಣ್ಣೂರು ಸಿಟಿ ಜುಮ್ಮಾ ಮಸೀದಿಯಲ್ಲಿ ಸುಬಹಿ ನಮಾಜ್ ನಿರ್ವಹಿಸುತ್ತಿರುವಾಗ ಪ್ರಜ್ಞಾಹೀನರಾದವರು ಅಂದು ರಾತ್ರಿ 12 ಗಂಟೆಗೆ ವಿಧಿವಶವಾದರು.

ನೂತನವಾದದ ವಿರುದ್ಧ ಜೀವನಪರ್ಯಂತ ಹೋರಾಡಿ ಸುನ್ನತ್ ಜಮಾಅತಿನ ಏಳಿಗೆಗಾಗಿ ಅವಿರತವಾಗಿ ಶ್ರಮಿಸಿದ ಮಹಾನರು ಕಣ್ಣೂರು ಸಿಟಿ ಜುಮ್ಮಾ ಮಸೀದಿಯ ಮುಂಭಾಗದಲ್ಲಿ ಅಂತ್ಯ ವಿಶ್ರಮ ಪಡೆಯುತ್ತಿದ್ದಾರೆ.
🔖🔖🔖🔖🔖🔖🔖