#ಝಿಯಾರತ್ತ್_ಕೇಂದ್ರ
🔰🔰 9️⃣0️⃣ 🔰🔰
➖➖➖➖➖➖➖
#ಹೆಸರಾಂತ_ತತ್ವಚಿಂತಕ_ಕುಂಞಾಯಿನ್ #ಮುಸ್ಲಿಯಾರ್ (ಖ:ಸಿ) ತಲೆಶ್ಶೇರಿ, ಕಣ್ಣೂರು ಜಿಲ್ಲೆ.
➖➖➖➖➖➖➖➖
اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ
🕌🕌🕌🕌🕌🕌🕌
✍ ಗಫೂರ್ ಬಾಯಾರ್
〰️〰️〰️〰️〰️〰️〰️
ಹದಿನೇಳು ಮತ್ತು ಹದಿನೆಂಟನೆ ಶತಮಾನಗಳ ನಡುವೆ ದಕ್ಷಿಣ ಭಾರತ ಕಂಡ ಹೆಸರಾಂತ ಮಾಪ್ಪಿಳ ಕವಿಯೂ ಸಮಾಜ ಸುಧಾರಕರೂ, ಇಸ್ಲಾಮಿಕ್ ಧಾರ್ಮಿಕ ವಿದ್ವಾಂಸರೂ ಖಾದಿರಿಯಾ ತ್ವರೀಖತ್ತಿನ ಶೈಖರೂ ಆಗಿ ಎಲ್ಲರ ಗಮನ ಸೆಳೆದಿದ್ದ ತತ್ವಚಿಂತಕರಾಗಿದ್ದರು ಕುಂಞಾಯಿನ್ ಮುಸ್ಲಿಯಾರ್ (ಖ:ಸಿ)
ತಲಶ್ಶೇರಿಯ ಚಂದನಂಕಂಡಿ ಎಂಬಲ್ಲಿ ಮರಕ್ಕಯಿಲ್ ಮನೆತನದಲ್ಲಿ ಹದಿನೇಳನೇ ಶತಮಾನದಲ್ಲಿ ಜನಿಸಿದ ಚಂದನಂಕಂಡಿ ಮರಕ್ಕಯಿಲ್ ಕುಂಞಿ ಮಾಹಿನ್ ಕ್ರಮೇಣ ಕುಂಞಾಯಿನ್ ಮುಸ್ಲಿಯಾರ್ (ಖ:ಸಿ) ಎಂದೇ ಅರಿಯಲ್ಪಡುತ್ತಿದ್ದರು.
ಹುಟ್ಟೂರಿನಲ್ಲೇ ಪ್ರಾಥಮಿಕ ವಿದ್ಯಾಭ್ಯಾಸವನ್ನು ಗಳಿಸಿದ ಅವರು ನಂತರ ಮಲಬಾರಿನ ಮಕ್ಕ ಎಂದೇ ಅರಿಯಲ್ಪಡುವ ಪೊನ್ನಾನಿಗೆ ತೆರಳಿ ಶೈಖ್ ನೂರುದ್ದೀನ್ ಮಖ್ದೂಮ್ (ನ.ಮ) ಮತ್ತು ಅಬ್ದುಸ್ಸಲಾಂ ಮಖ್ದೂಮ್ (ನ.ಮ) ಎಂಬ ಹೆಸರಾಂತ ವಿದ್ವಾಂಸರಿಂದ ಉನ್ನತ ಶಿಕ್ಷಣ ಗಳಿಸಿದರು.
ಮಲಯಾಳಂ ತಮಿಳು ಮತ್ತು ಅರೇಬಿಕ್ ಭಾಷೆಗಳಲ್ಲಿ ಹಿಡಿತ ಹೊಂದಿದ್ದ ಅವರು ತತ್ವಚಿಂತಕರೂ, ವಿದ್ವಾಂಸರೂ ಆಗಿದ್ದರು. ಜನಸಾಮಾನ್ಯರ ನಡುವೆ ಏನಾದರೂ ಸಮಸ್ಯೆಗಳು ತಲೆದೋರಿದಾಗ ಅದರ ಪರಿಹರಿಸಲು ಅಂದಿನ ಮಖ್ದೂಮಿಗಳು (ನ:ಮ) ಕುಂಞಾಯಿನ್ ಮುಸ್ಲಿಯಾರ (ಖ:ಸಿ)ರ ಬಳಿ ತೆರಳುವಂತೆ ಶಿಫಾರಸು ಮಾಡುತ್ತಿದ್ದರು.
ಕುಂಞಾಯಿನ್ ಮುಸ್ಲಿಯಾರರ ಚಿಂತನೆ, ಜಾಣ್ಮೆ, ಚತುರತೆ, ಬುದ್ದಿವಂತಿಕೆಗಳ ಬಗ್ಗೆ ಇತಿಹಾಸಕಾರರು ವಿವರಿಸುವಾಗ "ತುರ್ಕಿಯ ಚಿಂತಕ ನಸ್ರುದ್ದೀನ್ ಹೂಜ"ರಿಗೆ ಹೇೂಲಿಕೆ ಮಾಡುತ್ತಾರೆ.
ಕವಿಯಾಗಿದ್ದ ಕುಂಞಾಯೀನ್ ಮುಸ್ಲಿಯಾರ (ಖ:ಸಿ)ರು ಹಲವಾರು ಪದ್ಯ ಮತ್ತು ಗದ್ಯಗಳನ್ನು ರಚಿಸಿದ್ದರಾದರೂ ಅವುಗಳ ಪೈಕಿ ಹಲವಾರು ಕೃತಿಗಳನ್ನು ವಸಾಹತುಶಾಹಿಗಳು ನಾಶಪಡಿಸಿದ್ದಾರೆ ಎನ್ನಲಾಗುತ್ತಿದೆ.
ಅಳಿದುಳಿದ ಗ್ರಂಥ ಅಥವಾ ಕೃತಿಗಳಲ್ಲಿ ಖಾದಿರೀಯ್ಯಾ ಸೂಫಿ ಸರಣಿಯ ಪ್ರಚಾರದ ಜೊತೆಗೆ ಪ್ರವಾದಿ ﷺِ ರವರ ಜೀವನದ ವೈಶಿಷ್ಟ್ಯತೆಯನ್ನು ಸಾರುವ ಮದ್ಹ್ ಮಾಲೆ, ನೂಲ್ ಮಾಲೆ ಮತ್ತು ಕಪ್ಪಪಾಟ್ ಪ್ರಮುಖವಾದವು.
ನಾನೂರು ವರ್ಷಗಳ ಇತಿಹಾಸವನ್ನು ಹೊಂದಿರುವ ಖಾಝಿ ಮುಹಮ್ಮದ್ (ನ:ಮ) ವಿರಚಿತ ಮುಹಿಯುದ್ದೀನ್ ಮಾಲೆಯ ನಂತರ ಅತಿಹೆಚ್ಚು ಜನಪ್ರಿಯತೆ ಗಳಿಸಿದ ಕೃತಿಯಾಗಿದೆ ಕಪ್ಪಪಾಟ್.
*"ಕಪ್ಪಪಾಟ್ಟ್"*
🔹🔹🔹🔹🔹🔹🔹
ಒಬ್ಬ ಕಪ್ತಾನ (ಹಡಗು ಚಲಾಯಿಸುವವನು) ಮತ್ತು ಆತನ ಪತ್ನಿಯನ್ನು ಕಥಾಪಾತ್ರಧಾರಿಗಳಾಗಿಯೂ ಹಡಗನ್ನು ಈ ಕೃತಿಯ ವಸ್ತುವನ್ನಾಗಿಯೂ ಚಿತ್ರಿಸಲಾಗಿದೆ.
ಮುಹ್ಯದ್ದೀನ್ ಮಾಲೆಯಂತೆಯೇ ಮಾನವ ಜೀವನದಲ್ಲಿ ಆಧ್ಯಾತ್ಮಿಕ ಯಾತ್ರೆಯ ಅನಿವಾರ್ಯತೆ ಎಷ್ಟು ಎಂಬ ವಿಷಯದತ್ತ ಬೆಳಕು ಚೆಲ್ಲುವ ಕೃತಿಯಾಗಿದೆ ಕಪ್ಪಪಾಟ್.
ಮೇಲ್ನೋಟಕ್ಕೆ ಶಾಂತವಾಗಿರುವಂತೆ ಕಂಡರೂ ಸಹ ಒಡಲಾಳದಲ್ಲಿ ಅಲೆಗಳ ಭೋರ್ಗರೆತ, ಸುಳಿ, ಬಿರುಗಾಳಿ, ಚಂಡಮಾರುತಗಳನ್ನೊಳಗೊಂಡ ಕಡಲಿನಲ್ಲಿ ಸಂಚರಿಸುವ ಹಡಗಿಗೆ ಮಾನವ ಜೀವನವನ್ನು ಹೋಲಿಸಿರುವ ಕವಿಯು, ಶರೀಯತ್ತಿನ ನಿಯಮಗಳನ್ನು ಪಾಲಿಸುತ್ತಾ ಜೀವನ ನಡೆಸಿದಾಗ ಮಾತ್ರವೇ ನಾವು ನಿಶ್ಚಿತ ಗುರಿ ತಲುಪಲು ಸಾಧ್ಯ ಎಂಬುದನ್ನು ಬಹು ಸೊಗಸಾಗಿ ವಿವರಿಸಿದ್ದಾರೆ.
ಮಾನವ ಜೀವನವನ್ನು ಹಡಗಿಗೆ ಹೋಲಿಸಿ ಗದ್ಯ ರಚಿಸಲು ಮಹಾನರಿಗೆ ಪ್ರೇರಣೆ ಸಿಕ್ಕಿದ್ದು ನೂರುದ್ದೀನ್ ಮಖ್ದೂಮ್ (ನ:ಮ) ರವರಿಂದಾಗಿದೆ.
*ಸ್ವಾರಸ್ಯಕರವಾದ ಆ ಪ್ರೇರಣೆಯ ಹಿಂದಿನ ರಹಸ್ಯ ಹೀಗಿದೆ...*
ಪೊನ್ನಾನಿಯಲ್ಲಿ ವ್ಯಾಸಂಗ ಮಾಡುತ್ತಿರುವಾಗ ಕುಂಞಾಯಿನ್ ಮುಸ್ಲಿಯಾರ (ಖ:ಸಿ)ರು ನೂರುದ್ದೀನ್ ಮಖ್ದೂಮ್ (ನ:ಮ) ರವರ ಮನೆಯಲ್ಲಿ ಊಟ ಮಾಡುತ್ತಿದ್ದರು. ಕುಂಞಾಯಿನ್ ಮುಸ್ಲಿಯಾರ (ಖ:ಸಿ)ರು ಮಹಾನ್ ವಿದ್ವಾಂಸರೂ ಸೂಫಿವರ್ಯರೂ ಆಗಿದ್ದಾರೆಂದು ನೂರುದ್ದೀನ್ ಮಖ್ದೂಮ್ (ಖ.ಸಿ) ರವರು ತಮ್ಮ ಪತ್ನಿಗೆ ತಿಳಿಸಿದ್ದರು.
ಹಾಗಾಗಿ ನೂರುದ್ದೀನ್ ಮಖ್ದೂಮ್ (ನ:ಮ)ರವರ ಪತ್ನಿಗೆ ಮುಸ್ಲಿಯಾರ್ರಿಂದ ಒಂದು ದ್ಸಿಕ್ರ್ ಪಡೆಯಬೇಕೆಂಬ ಮಹತ್ವಾಕಾಂಕ್ಷೆ ಇತ್ತು. ಹಾಗಿರಲೊಂದು ದಿನ ಮಹಾನರು ಊಟಕ್ಕೆ ಬಂದಾಗ ತಮಗೊಂದು ದ್ಸಿಕ್ರ್ ಹೇಳಿ ಕೊಡಿ ಎಂದರಂತೆ. ಸದಾ ಹಾಸ್ಯಪ್ರಜ್ಞೆಯಿಂದಿರುತ್ತಿದ್ದ ಮಹಾನರು ತಕ್ಷಣವೇ *"ಏಲೆ ಮಾಲೆ"* ಎಂದು ಪಠಿಸಿ ಎಂದರಂತೆ.
ಹಾಗೆ ಪತ್ನಿಯು ರಾತ್ರಿ "ಏಲೆ ಮಾಲೆ, ಏಲೆ ಮಾಲೆ" ಎಂದು ಜಪಿಸುತ್ತಿರುವುದನ್ನು ಕಂಡು ನೂರುದ್ದೀನ್ ಮಖ್ದೂಮ್ (ನ:ಮ) ಏನಿದು ಏಕೆ ಹಾಗನ್ನುತ್ತಿರುವೆ ಎಂದು ಕೇಳಿದಾಗ ಕುಂಞಾಯಿನ್ ಮುಸ್ಲಿಯಾರ (ಖ:ಸಿ)ರು ಕಲಿಸಿದ ದ್ಸಿಕ್ರ್ ಇದು ಎಂದರಂತೆ.
ಮರುದಿನ ಕುಂಞಾಯಿನ್ ಮುಸ್ಲಿಯಾರ್ (ಖ:ಸಿ)ರನ್ನು ಭೇಟಿಯಾದ ನೂರುದ್ದೀನ್ ಮಖ್ದೂಮ್ (ನ:ಮ)ರವರು, "ಮನುಷ್ಯರನ್ನು ನೀವೇಕೆ ಹಡಗನ್ನಾಗಿಸುತ್ತೀರಿ.."? ಎಂದು ಕೇಳಿದರಂತೆ. ಈ ಮಾತು ಕೇಳಿದ ಕುಂಞಾಯಿನ್ ಮುಸ್ಲಿಯಾರ (ಖ:ಸಿ)ರು ಅಂದಿನಿಂದ ಮನುಷ್ಯರನ್ನು ಹಡಗಿಗೆ ಹೋಲಿಸಿ ಕಪ್ಪಪಾಟ್ (ಹಡಗು ಹಾಡು) ರಚಿಸಲಾರಂಭಿಸಿದರು ಎನ್ನಲಾಗುತ್ತದೆ.
ಪೊನ್ನಾನಿಯಲ್ಲಿ ವಿದ್ಯಾರ್ಥಿಯಾಗಿರುವಾಗ ಮಹಾನರು ರಚಿಸಿದ ಕಪ್ಪಪಾಟ್ ನಂತರ ಸಫೀನ ಎಂಬ ಹೆಸರಿನಿಂದ ಹೆಸರುವಾಸಿಯಾಯಿತು. ಹಿಂದಿನ ಕಾಲದ ಜನರು ಮಾಲೆ ಮತ್ತು ಮೌಲೀದ್ಗಳ ಗ್ರಂಥಗಳನ್ನು ಸಫೀನ ಎಂದೇ ಕರೆಯುತ್ತಿದ್ದರು.
ಸಫೀನ ಎಂದರೆ ಅರಬೀ ಭಾಷೆಯಲ್ಲಿ ಹಡಗು ಎಂದರ್ಥ. ಕುಂಞಾಯಿನ್ ಮುಸ್ಲಿಯಾರ (ಖ:ಸಿ)ರ ಗ್ರಂಥ ಮತ್ತು ಕೃತಿಗಳು ಹಡಗಿನ ಉಪಮೆಯನ್ನು ಹೊಂದಿದ್ದರಿಂದ ಹಾಗೂ ಆ ಗ್ರಂಥಗಳು ಜನಮಾನಸದಲ್ಲಿ ಬಹಳ ಪ್ರಭಾವ ಬೀರಿದ್ದರಿಂದ ಆ ಪ್ರಭಾವವೂ ಇದಕ್ಕೆ (ಅಂದರೆ ಹಿಂದಿನ ತಲೆಮಾರಿನವರು ಗ್ರಂಥಗಳಿಗೆ ಸಫೀನ ಎನ್ನಲು) ಕಾರಣವಾಗಿರಬಹುದು ಎನ್ನುವುದು ಇತಿಹಾಸಕಾರರ ಅಂಬೋಣ.
ಕುಂಞಾಯಿನ್ ಮುಸ್ಲಿಯಾರ (ಖ:ಸಿ)ರ ಮತ್ತೊಂದು ಹೆಸರಾಂತ ಕೃತಿಯಾಗಿದೆ
*"ನೂಲ್ ಮದ್ಹ್"*
🔸🔸🔸🔸🔸🔸🔸
ಖಾಝಿ ಮುಹಮ್ಮದ್ (ರ)ವರು ಮುಹಿಯುದ್ದೀನ್ ಮಾಲೆ ರಚಿಸಿದ 130 ವರ್ಷಗಳ ತರುವಾಯ ಅಷ್ಟೇ ಪ್ರಸಿದ್ಧಿ ಪಡೆದಿರುವ ಈ 'ನೂಲ್ ಮದ್ಹ್' 1737 ರಲ್ಲಿ ರಚಿಸಲ್ಪಟ್ಟಿತು. ನೂಲ್ ಎಂದರೆ ತಮಿಳಿನಲ್ಲಿ ಪ್ರವಾದಿ ﷺِ ಎಂಬ ಅರ್ಥವಿದೆ. ಹಾಗಾಗಿ ಪ್ರವಾದಿ ﷺِ ಕೀರ್ತನೆಗಳನ್ನೊಳಗೊಂಡ ತಮ್ಮ ಕೃತಿಗೆ ಕುಂಞಾಯಿನ್ ಮುಸ್ಲಿಯಾರ (ಖ:ಸಿ)ರು ಈ ಪದವನ್ನು ತಮಿಳಿನಿಂದ ಆಯ್ದುಕೊಂಡಿರಬಹುದೆಂದು ಇತಿಹಾಸಕಾರರು ಬಣ್ಣಿಸಿದ್ದಾರೆ.
ಕುಂಜಾಯಿನ್ ಮುಸ್ಲಿಯಾರ (ಖ:ಸಿ)ರ ಕೃತಿಗಳು ಮಲಯಾಳಂನಲ್ಲಿ ಇದ್ದರೂ ಸಹ ಅವರ ಕೃತಿಗಳಲ್ಲಿ ತಮಿಳು ಭಾಷೆಯ ಪ್ರಭಾವ ಹೆಚ್ಚಾಗಿ ಕಂಡು ಬರುತ್ತದೆ.
ಮಹಾನರ (ಖ:ಸಿ)ರ ಮೂರನೆ ಪ್ರಮುಖ ರಚನೆಯಾಗಿದೆ.
*"ನೂಲ್ ಮಾಲ"*
♦️♦️♦️♦️♦️♦️♦️
ಹಿಜರಿ 5ನೇ ಶತಮಾನದಲ್ಲಿ ಜೀವಿಸಿದ್ದ ಪುಣ್ಯಾತ್ಮರಾದ ಅಶೈಖ್ ಮುಹ್ಯಿದ್ದೀನ್ ಅಬ್ದುಲ್ ಖಾದಿರ್ ಜೀಲಾನಿ (ರ) ರವರ ಜೀವನದ ಮಹತ್ವಗಳನ್ನು ಸಾರುವ ಸ್ತುತಿಗೀತೆಗಳಾಗಿವೆ
ನೂಲ್ ಮಾಲ.
ಹಾಸ್ಯಪ್ರಜ್ಞೆಯನ್ನು ಮೈಗೂಡಿಸಿಕೊಂಡಿದ್ದ ಕುಂಞಾಯಿನ್ ಮುಸ್ಲಿಯಾರ (ಖ:ಸಿ)ರು ಅಂದಿನ ಕಾಲದ ನಾಡದೊರೆಯ ಅರಮನೆಯಲ್ಲಿ ವಿದೂಷಕನಾಗಿದ್ದ ಮಂಗಾಟಚ್ಚನ್ ಎಂಬುವವರೊಂದಿಗೆ ಆತ್ಮೀಯ ಸ್ನೇಹ ಬಾಂಧವ್ಯ ಹೊಂದಿದ್ದರು. ಮಂಗಾಟಚ್ಚನ್ ಮತ್ತು ಕುಂಞಾಯಿನ್ ಮುಸ್ಲಿಯಾರ (ಖ:ಸಿ)ರ ನಡುವಿನ ಗೆಳೆತನದ ಹಾಸ್ಯಮಯ ಪ್ರಸಂಗಗಳು ಬಹಳ ಜನಪ್ರಿಯವಾಗಿದ್ದು ಹಾಸ್ಯದ ಝಲಕ್ಗಳಲ್ಲಿ ಮುಸ್ಲಿಯಾರ್ (ಖ:ಸಿ) ರನ್ನು ಹಾಸ್ಯನಟ ಎಂಬಂತೆ ಬಿಂಬಿಸಲಾಗುತ್ತಿದೆ. ಮಹಾನ್ ವಿದ್ವಾಂಸರೂ, ಸೂಫಿವರ್ಯರೂ ಆಗಿದ್ದ ಕುಂಞಾಯಿನ್ ಮುಸ್ಲಿಯಾರ (ಖ:ಸಿ)ರನ್ನು ಹಾಸ್ಯನಟ ಎಂಬಂತೆ ಬಿಂಬಿಸಲ್ಪಡುತ್ತಿರುವುದು ನಿಜಕ್ಕೂ ಖೇದಕರ ಸಂಗತಿ.
ಪ್ರಸ್ತುತ ಕಾಲಘಟ್ಟದಲ್ಲಿ ಕುಂಞಾಯಿನ್ ಮುಸ್ಲಿಯಾರ (ಖ:ಸಿ)ರು ಹಾಸ್ಯಗಾರರೆಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆಯಾದರೂ ಅವರ ಯಾವ ಕೃತಿಯಲ್ಲೂ ಸಹ ಕ್ಷುಲ್ಲಕ ವಿಷಯಗಳ ಪರಾಮರ್ಶೆಗಳಿಲ್ಲ. ಬದಲಾಗಿ ಎಲ್ಲ ಕೃತಿಗಳೂ ಸಹ ಆಳವಾದ ಚಿಂತನೆ ಮತ್ತು ವಿಶ್ಲೇಷಣೆಯಿಂದ ಕೂಡಿರುವಂಥಾಗಿದೆ. ಮಾತ್ರವಲ್ಲ ಅವುಗಳಲ್ಲಿ ಪ್ರಸ್ತಾಪಿರುವ ಒಂದೊಂದು ವಿಷಯಗಳೂ ಸಹ ನಮ್ಮನ್ನು ಚಿಂತನೆಯ ಒರೆಗಲ್ಲಿಗೆ ಹೆಚ್ಚುವಂತಹ ಗಹನವಾದ ವಿಷಯಗಳಾಗಿವೆ.
ಕವಿಯೂ, ತತ್ವಜ್ಞಾನಿಯೂ, ಸಮಾಜ ಸುಧಾರಕರೂ, ಆಧ್ಯಾತ್ಮಿಕ ಚಿಂತಕರೂ ಆಗಿದ್ದ ಕುಂಞಾಯಿನ್ ಮುಸ್ಲಿಯಾರ (ಖ:ಸಿ)ರನ್ನು ಇತಿಹಾಸಕಾರರು ತುರ್ಕಿಯ ಹೆಸರಾಂತ ಚಿಂತಕ ನಸ್ರುದ್ದೀನ್ ಹೂಜರೊಂದಿಗೆ ಹೋಲಿಕೆ ಮಾಡಿದ್ದಾರೆ. ಅಂದರೆ ಮುಸ್ಲಿಯಾರ (ಖ:ಸಿ)ರು ಅಷ್ಟರಮಟ್ಟಿಗೆ ವಿಖ್ಯಾತಿ ಪಡೆದ ಮಹಾನರಾಗಿದ್ದರು.
ಹಾಸ್ಯ ಪ್ರಜ್ಞೆಯ ಜೊತೆಗೆ ಧಾರ್ಮಿಕ ರಂಗ ಮತ್ತು ಸಾಮಾಜಿಕ ರಂಗದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಲೇ ಮಂಗಾಟಚ್ಚನ್ರ ಗೆಳೆತನದ ಮೂಲಕ ಸೌಹಾರ್ದತೆ ಹಾಗೂ ಸಾಮರಸ್ಯತೆಯ ಸಂದೇಶ ಸಾರಿದ ಕುಂಞಾಯಿನ್ ಮುಸ್ಲಿಯಾರ (ಖ:ಸಿ)ರು ಅಲ್ಲಾಹನ ಇಷ್ಟ ದಾಸರಾದ ವಿಲಾಯತ್ತಿನ ಪದವಿ ಪಡೆದು ಹಲವಾರು ಕಶ್ಫ್ ಕರಾಮತ್ಗಳನ್ನೂ ಕಾಣಿಸಿದ್ದರು. ಮಹಾನರ ಮರಣದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ತಲಶ್ಶೇರಿಯ ಹಳೆ ಜುಮಾ ಮಸೀದಿಯ ಪ್ರಾಂಗಣದಲ್ಲಿ ಮಹಾನರು ಅಂತ್ಯ ವಿಶ್ರಮ ಪಡೆಯುತ್ತಿದ್ದಾರೆ.
🌀🌀🌀🌀🌀🌀🌀