Sunday, September 29, 2019

ಭಾರತದಲ್ಲಿ ಗ್ರ್ಯಾಂಡ್ ಮುಫ್ತಿ ಯಾಕಿರಬಾರದು

ಸುಲ್ತಾನುಲ್ ಉಲಮಾ ಶೈಖುನಾ ಎ.ಪಿ. ಉಸ್ತಾದ್ ರವರನ್ನು ದೆಹಲಿಯಲ್ಲಿ ನಡೆದ ಗರೀಬ್ ನವಾಜ್ ಶಾಂತಿ ಸಮ್ಮೇಳನದಲ್ಲಿ ಗ್ರ್ಯಾಂಡ್ ಮುಫ್ತಿ ಪದ ಅಲಂಕರಿಸಿದ ನಂತರ ,ಗ್ರ್ಯಾಂಡ್ ಮುಫ್ತಿಯ ಬಗ್ಗೆ ಚರ್ಚೆಗಳು ಶುರುವಾಗಿವೆ. ದಕ್ಷಿಣ ಭಾರತದಲ್ಲಿ ಈ ಪದ ಬಳಕೆ ಕಡಿಮೆಯಾಗಿರುವುದರಿಂದ,ಹಾಗೂ ಈ ಬಗ್ಗೆ ಮಾಹಿತಿಯ ಕೊರತೆಯಿಂದ ಇಂತಹ ಚರ್ಚೆಗಳಿಗೆ ರೆಕ್ಕೆ ಪುಕ್ಕ ಸಿಕ್ಕಿವೆ.

ಗ್ರ್ಯಾಂಡ್ ಮುಫ್ತಿ ಅಂದರೆ..
ತುರ್ಕಿ ಕೇಂದ್ರವಾಗಿಟ್ಟು ಉಸ್ಮಾನಿಯ ಖಿಲಾಫತ್ ಆಡಳಿತ ನಡೆಸುತ್ತಿದ್ದ ಕಾಲದಲ್ಲಿ ಗ್ರ್ಯಾಂಡ್ ಮುಫ್ತಿ ಎಂಬ ಪದ ಚಾಲ್ತಿಗೆ ಬಂತು.
ಇಸ್ಲಾಮಿನ ಬಗ್ಗೆ ಆಳವಾದ ಜ್ಞಾನ ಹೊಂದಿ,ಸಮಕಾಲೀನ ಸಮಸ್ಯೆಗಳ ಬಗ್ಗೆ ಸ್ಪಷ್ಟವಾದ ಅರಿವಿದ್ದು ,ಅದರ ಪರಿಹಾರಕ್ಕೆ ಪ್ರಾಯೋಗಿಕವಾದ ವಿಧಿ ನೀಡಲು ಅರ್ಹತೆಯಿರುವವರನ್ನು ಮುಫ್ತಿ ಎನ್ನಲಾಗುತ್ತದೆ. ಈ ಮುಫ್ತಿಗಳ ಮುಖಂಡರಿಗೆ ಗ್ರ್ಯಾಂಡ್ ಮುಫ್ತಿ ಎಂದು ಕರೆಯಲಾಗುತ್ತದೆ ಭಿನ್ನಾಭಿಪ್ರಾಯಗಳಿರುವ ವಿಷಯದಲ್ಲಿ ಅಂತಿಮ ತೀರ್ಮಾನ ನೀಡುವುದು, ಶರೀಹತ್‌ನ ಸಂರಕ್ಷಣೆಗೆ ಯುಕ್ತಿ ಪೂರ್ಣವಾದ ಮಾರ್ಗ ಅನುಸರಿಸುವುದು ಈ ಗ್ರಾಂಡ್ ಮುಫ್ತಿಯ ಮುಖ್ಯ ಜವಾಬ್ದಾರಿ

ಇಸ್ಲಾಮೀ ಇತಿಹಾಸದಲ್ಲಿ ಇದನ್ನು ವಿವಿಧ ರೂಪದಲ್ಲಿ ಉಪಯೋಗಿಸಲಾಗಿತ್ತು.
ಮುಸ್ಲಿಂ ರಾಷ್ಟ್ರಗಳಲ್ಲಿ ಸರಕಾರವೇ ಇಂತಹ ಪದವಿ ಸೃಷ್ಟಿಸಿ, ತಾನೇ ಆ ಪದವಿಗೆ ಯೋಗ್ಯ ವಿದ್ವಾಂಸರನ್ನು ನಿಯಮಿಸುತ್ತದೆ. ಉದಾಹರಣೆಗೆ ಸೌದಿ.
ಇನ್ನು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳಲ್ಲಿ ಅಥವಾ ಮುಸ್ಲಿಂ ಅಲ್ಪ ಸಂಖ್ಯಾತ ದೇಶಗಳಲ್ಲಿ ಅಲ್ಲಿನ ಅಧಿಕೃತ ಇಸ್ಲಾಮಿಕ್ ಒಕ್ಕೂಟಗಳು, ಸಮಿತಿಗಳು, ಉಲಮಾಗಳು ಈ ಪದವಿಗೆ ಅರ್ಹ ವಿದ್ವಾಂಸನನ್ನು ನೇಮಕ ಮಾಡುತ್ತದೆ. ಉಸ್ಮಾನಿಯಾ ಖಿಲಾಫತ್‌ನ ಅದೇ ಅನುಕರಣೆಯನ್ನು ಈಜಿಪ್ತ್ ಮಾಡಿದೆ. ಆಸ್ರೇಲಿಯಾ, ಬಾಂಗ್ಲಾದೇಶ, ಬೋಸ್ನಿಯಾ, ಹಂಗೇರಿ,ಅಲ್ಬೇನಿಯ ದಂತಹ ರಾಷ್ಟ್ರಗಳಲ್ಲಿರುವ ಗ್ರ್ಯಾಂಡ್ ಮುಫ್ತಿಗಳು ಇದಕ್ಕೆ ಉದಾಹರಣೆ.
ಇನ್ನು ಇವರನ್ನು ಅಂಗೀಕರಿಸದ ಮುಸ್ಲಿಂ ಗುಂಪುಗಳು ಆ ರಾಷ್ಟ್ರದಲ್ಲಿ ಇರಬಹುದು. ಹಾಗೆಂದು ಗ್ರ್ಯಾಂಡ್ ಮುಫ್ತಿ ಪದ ಅಪ್ರಸ್ತುತವಾಗುವುದಿಲ್ಲ.

ಇನ್ನು ಭಾರತದಲ್ಲಿ ಈ ಪದವಿ ಹಿಂದೆಯೂ ಚಾಲ್ತಿಯಲ್ಲಿತ್ತು.* *2018 ಜುಲಾ 20ರಂದು ವಫಾತಾದ ಶೈಖ್ ಮುಹಮ್ಮದ್ ಅಖ್ತಾರ್ ರಝಾ ಖಾನ್ ಅಲ್ ಅಝ್ಹರಿಯವರು ಹಿಂದಿನ ಗ್ರ್ಯಾಂಡ್ ಮುಫ್ತಿಯಾಗಿದ್ದರು.
ಇಮಾಂ ಅಹ್ಮದ್ ರಝಾಖಾನ್‌ರವರ ಪೌತ್ರರಾಗಿರುವ ಅಖ್ತಾರ್ ರಝಾಖಾನ್‌ರವರನ್ನು ಕೂಡಾ ಇದೇ ರೀತಿ ನೇಮಿಸಲಾಗಿತ್ತು.
ನಿನ್ನೆ ದೆಹಲಿಯ ರಾಮಲೀಲ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಉತ್ತರ ಭಾರತದ ಸುನ್ನೀ ಉಲಮಾ ಒಕ್ಕೂಟದ ಪ್ರತಿನಿಧಿಗಳು, ಇಸ್ಲಾಮಿಕ್ ಸಂಘ ಸಂಸ್ಥೆಗಳ ಮುಖಂಡರು, ಸೂಫಿ ಸಂತರ ಪ್ರತಿನಿಧಿಗಳು ಒಟ್ಟು ಸೇರಿ ಶೈಖುನಾ ಎ.ಪಿ. ಉಸ್ತಾದರನ್ನು ಈ ಪದವಿಗೆ ಆರಿಸಿದ್ದಾರೆ.
ಇನ್ನು ಇವರನ್ನು ಅಂಗೀಕರಿಸದವರು ಈ ದೇಶದಲ್ಲಿರಬಹುದು. ಹಾಗೆಂದು ಈ ಪದವಿ ನೀಡುವುದು ಸರಿಯಲ್ಲವೆಂದು ಹೇಳುವುದು ಬಾಲಿಶತನ.

ಕಾರಣ ದೇಶದ ಮುಸಲ್ಮಾನರಲ್ಲಿ ಬಹು ಸಂಖ್ಯಾತರಾಗಿರುವ ಸುನ್ನಿಗಳಿಗೆ ಎ.ಪಿ. ಉಸ್ತಾದ್ ಅಂಗೀಕೃತ, ಪ್ರಬಲ ನಾಯಕ.

ಇನ್ನು ಎ.ಪಿ. ಉಸ್ತಾದ್‌ರೊಂದಿಗೆ ಸಂಘಟನಾ, ಸಿದ್ಧಾಂತಗಳ ಭಿನ್ನತೆಯನ್ನು ಬದಿಗಿಟ್ಟು ಎಲ್ಲರೂ ಚಿಂತಿಸಿದರೆ ಇಂತಹ ನೇಮಕದ ಅನಿವಾರ್ಯತೆ ಇದೆಯೆನ್ನಬಹುದು. ವಿಶೇಷವಾಗಿ ಮುಸ್ಲಿಂ ಸಮುದಾಯ ಶಿಕ್ಷಣ ಆರೋಗ್ಯ, ಉದ್ಯೋಗ, ಆರ್ಥಿಕ ರಂಗದಲ್ಲಿ ತೀವ್ರ ಹಿನ್ನಡೆ ಅನುಭವಿಸುತ್ತಿದ್ದು ಇವರ ಉನ್ನತಿಗೆ ಶ್ರಮಿಸುವ ವಿದ್ವಾಂಸರ ಅನಿವಾರ್ಯತೆ ಖಂಡಿತ ಇದೆ. ನೇತೃತ್ವ ಕೊರತೆ ಅನುಭವಿಸುತ್ತಿರುವ ಈ ಸಮುದಾಯಕ್ಕೆ ಸರಿಯಾದ ದಿಕ್ಕು, ಸ್ಪಷ್ಟವಾದ ದಾರಿ ತೋರಿಸುವ ನಾಯಕನ ಅಗತ್ಯವಿದೆ.

ಎ.ಪಿ. ಉಸ್ತಾದ್ ಯೋಗ್ಯ ವ್ಯಕ್ತಿಯಾ?
ಎ.ಪಿ. ಉಸ್ತಾದರ ಆಯ್ಕೆಯನ್ನು ವಿಮರ್ಶಿಸುವವರು, ಟೀಕಿಸುವವರು ಇರಬಹುದು. ಅದು ಅವರ ಸ್ವಾತಂತ್ರ್ಯ. ಆದರೆ ಪೂರ್ವಗ್ರಹ ಮೆರೆತು ಚಿಂತಿಸಿದರೆ ಸತ್ಯ ಮನದಟ್ಟಾಗಬಹುದು. ದೇಶದ 22ಕ್ಕೂ ಮಿಕ್ಕ ರಾಜ್ಯಗಳಲ್ಲಿ ಶಿಕ್ಷಣ, ಆರೋಗ್ಯ, ಕೇಂದ್ರಗಳನ್ನು ಸ್ಥಾಪಿಸಿ, ಮಸ್ಜಿದ್ ,ಮದರಸಗಳನ್ನು ನಿರ್ಮಿಸಿ, ಅಲ್ಲೆಲ್ಲಾ ಮುಸ್ಲಿಮರನ್ನು ಒಗ್ಗೂಡಿಸಿ, ದೇಶದ ಪ್ರಜ್ಞಾವಂತ ಪ್ರಜೆಗಳನ್ನಾಗಿ ರೂಪಿಸುವಲ್ಲಿ , ಅವರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವಲ್ಲಿ  ಎ.ಪಿ ಉಸ್ತಾದರ ಪಾತ್ರ ಅವಿಸ್ಮರಣೀಯ.

ತಾನು ಮಾಡಬೇಕಾದ್ದನೆಲ್ಲಾ ಮಾಡಲು ತಾಖತ್ತಿರುವ, ಹೇಳಬೇಕಾದ್ದನ್ನು ಯಾರ ಮುಲಾಜಿಲ್ಲದೆ ಹೇಳುವ, ಯಾರೇ ಅಧಿಕಾರಕ್ಕೆ ಬಂದರೂ ಅವರೊಂದಿಗೆ ಸಮುದಾಯದ ಸ್ಥಿತಿಗತಿಗಳ ಬಗ್ಗೆ ಚರ್ಚಿಸುವ, ಸವಾಲುಗಳನ್ನು, ಸಮಸ್ಯೆಗಳನ್ನು ದೃಢವಾಗಿ ನಿಂತು ಎದುರಿಸಿ ಪರಿಹಾರ ಕೈಗೊಳ್ಳಲು ಸಮರ್ಥರಾಗಿರುವ ಎ.ಪಿ. ಉಸ್ತಾದ್ ಈ ಹುದ್ದೆಗೆ ಅರ್ಹವ್ಯಕ್ತಿಯೆಂದರೆ ತಪ್ಪಗಲಾರದು. ಇನ್ನು ಅವರು ಅರ್ಹರಲ್ಲದಿದ್ದರೆ ಅದಕ್ಕಿಂತಲೂ ಮಿಗಿಲಾದ ಬೇರಾರು ಇದ್ದಾರಾ?

ಎ.ಪಿ. ಉಸ್ತಾದರೊಂದಿಗೆ ವಿರೋಧ ಬದಿಗಿಟ್ಟು ಅವರ ಚಟುವಟಿಕೆ, ಸಾಮಾಜಿಕ ಕಳಕಳಿಯನ್ನು ಗಮನಿಸುವವರಿಗೆ ಈ ಸತ್ಯ ಮನದಟ್ಟಾದೀತು.
ಏನಂತೀರಾ?

No comments:

Post a Comment