Sunday, June 14, 2020

ನಿಮ್ಮ ಮನೆಯಲ್ಲಿ ಸಂತೋಷ ಬೇಕೇ? 40 ಸೂತ್ರಗಳು ಪಾಲಿಸಿ. ಭಾಗ 16

*ನಿಮ್ಮ ಮನೆಯಲ್ಲಿ ಸಂತೋಷ ಬೇಕೆ?*
*40 ಸೂತ್ರಗಳು ಪಾಲಿಸಿ*
••••••••••••••••••••••••••••••••••••••••••
  ಭಾಗ --16

📝 _ಮುನೀರ್ ಸಖಾಫಿ ಸಾಲೆತ್ತೂರು_

_*ಸೂತ್ರ  15:*_
 *ಸಭೆ ಸಮಾರಂಭಗಳ ಬಗ್ಗೆ ಮನೆ ಮಂದಿಯೊಂದಿಗೆ  ಸಮಾಲೋಚನೆ ನಡೆಯಲಿ*

ನಮ್ಮ ಮನೆಗಳಲ್ಲಿ ಒಂದಲ್ಲೊಂದು ಕಾರ್ಯಕ್ರಮ ನಡೆಯುತ್ತಾ ಇರುತ್ತದೆ.
ಕುಟುಂಬಸ್ಥರನ್ನು ಮತ್ತು ನೆರೆಕರೆಯವರನ್ನು ಕರೆದು ಮಾಡುವ ಸಮಾರಂಭಗಳಿಗೆ ಮನೆಯಲ್ಲಿ ಮುಶಾವರ (ಸಮಾಲೋಚನೆ )ನಡೆಯಬೇಕು.
ನಮ್ಮ ಮನೆಗಳಲ್ಲಿ ನಡೆಯುವ ಪ್ರಮುಖ ಕಾರ್ಯಕ್ರಮಗಳು
1.ಮಗುವಿನ ಹೆಸರಿಡುವ ಕಾರ್ಯಕ್ರಮ
2.ಮುಂಜಿ ಕಾರ್ಯಕ್ರಮ
3.ವಿವಾಹ ನಿಶ್ಚಯ
4.ಮದುವೆ
5.ಮದುವೆಯ ನಂತರದ ಒಂದೆರಡು ಕಾರ್ಯಕ್ರಮ
6.ಗೃಹ ಪ್ರವೇಶ
7.ರಬೀವುಲ್ ಅವ್ವಲ್ ತಿಂಗಳಲ್ಲಿ ಮೌಲಿದ್
8.ರಬೀವುಲ್ ಆಕಿರ್ ನಲ್ಲಿ ರಾತೀಬ್
9.ರಮಳಾನಿನಲ್ಲಿ ಇಫ್ತಾರ್
10.ಮರಣ ಹೊಂದಿದರೆ 3,7,40 ರ ಕಾರ್ಯಕ್ರಮಗಳು
ಹೀಗೆ ಹಲವಾರು ಸಮಾರಂಭಗಳು  ನಡೆಯುತ್ತದೆ.
ಮನೆಯ ಯಜಮಾನ ಈ ಸಮಾರಂಭಗಳನ್ನು ಆಲೋಚಿಸುವಾಗ ಮನೆಯಲ್ಲಿರುವ ಪತ್ನಿ-ಮಕ್ಕಳೊಂದಿಗೆ ಸಮಾಲೋಚನೆ ನಡೆಸುವುದು ಅತೀ ಮಹತ್ವದ ಸಂಗತಿಯಾಗಿದೆ.
ಉದ್ದೇಶಿಸಿದ ಕಾರ್ಯಕ್ರಮಗಳು ನಾವು ಉದ್ದೇಶಿಸಿದಂತೆ ಯಶಸ್ವಿಯಾಗಬೇಕಾದರೆ ಸಮಾಲೋಚನೆ ಅತ್ಯಗತ್ಯ.
ಯಾರೊಂದಿಗೂ ಸಮಾಲೋಚನೆ ನಡೆಸದೆ ಸ್ವಂತ ತೀರ್ಮಾನ ಪ್ರಕಾರ ಯಾವ ಕಾರ್ಯಕಗಳನ್ನು ಮಾಡಿದರೂ ಒಂದಲ್ಲ ಒಂದು ರೀತಿಯಲ್ಲಿ ಅದರಲ್ಲಿ ಸೋಲು ಖಚಿತ.
ಸಮಾಲೋಚನೆ ನಡೆಸದೆ ಮನೆ ಕಟ್ಟಿ ಸೋತವರಿದ್ದಾರೆ.
ಸಮಾಲೊಚನೆಯಿಲ್ಲದೆ ಮದುವೆಯಾಗಿ ಸೋತವರು ಇದ್ದಾರೆ.ವಾಹನ ಖರೀದಿಸಿ  ಸೋತವರೂ ಇದ್ದಾರೆ.

ಸಮಾಲೋಚನೆಯಿಂದ ಸೋಲು ಅಥವಾ ಗೆಲುವು ಉಂಟಾಗಬಹುದು.
ಮೂರ್ಖರೊಂದಿಗೆ ಸಮಾಲೋಚನೆ ನಡೆಸಿದ್ದಲ್ಲಿ ಸೋಲು ಹಾಗೂ ಬುದ್ಧಿವಂತರೊಂದಿಗೆ ಸಮಾಲೋಚನೆ ನಡೆಸಿದ್ದಲ್ಲಿ ಗೆಲುವು ಖಚಿತ.

ಅನುಭವವಿರುವ ಮನೆಯ ಯಜಮಾನನ ಮೇಲ್ನೋಟದಲ್ಲಿ ಮಾಡುವ ಕಾರ್ಯಕ್ರಮ ಯಶಸ್ವಿಯಾದರೂ ಯಜಮಾನನ ಮರಣದ ನಂತರ ಮನೆಯಲ್ಲಿ ಮಕ್ಕಳು ಮಾಡುವ ಸಮಾರಂಭದಲ್ಲಿ ಆಗಬಾರದ ಅನಾಹುತ ಆಗಿ ಹೋಗುತ್ತದೆ.ಕಾರಣ ಮಕ್ಕಳಿಗೆ ಅನುಭವ ಕಡಿಮೆ.ಅನುಭವವಿದ್ದ ತಂದೆ ಮಕ್ಕಳಿಗೆ ಅದನ್ನು ಕಲಿಸಿ ಕೊಟ್ಟಿಲ್ಲ.ನೂರು ಜನರನ್ನು ಸೇರಿಸಿ ಯಾವ ರೀತಿಯಲ್ಲಿ ಕಾರ್ಯಕ್ರಮ ಮಾಡಬೇಕೆಂಬ ಸಮಾಲೋಚನೆ ಮಕ್ಕಳೊಂದಿಗೆ ಅವರು ನಡೆಸಿಲ್ಲ.

ಮನುಷ್ಯನ ಬುದ್ಧಿ ಅಪಾರ.
ಒಬ್ಬನಿಗೆ ತೋಚದ ಕಾರ್ಯ ಇನ್ನೊಬ್ಬನಿಗೆ ತೋಚುವುದುಂಟು.ಹಲವರು ಸೇರಿ ಸಮಾಲೋಚನೆ ನಡೆಸುವಾಗ ಹಲವಾರು ಉತ್ತಮ ಅಭಿಪ್ರಾಯಗಳು ಕೇಳಿ ಬರುತ್ತದೆ.ಅದರಲ್ಲಿ ಉತ್ತಮವಾದುದನ್ನು ಆಯ್ಕೆ ಮಾಡಬಹುದಾಗಿದೆ.

قال الحسن: "ما تشاور قوم إلا هداهم الله لأفضل ما يحضرهم". (الأدب المفرد)
ಜನರ ಸಮಾಲೋಚನೆ ಅತ್ಯುತ್ತಮವಾದುದಕ್ಕೆ ತಲುಪಿಸುತ್ತದೆ ಎಂಬ ಹಸನ್ (ರ)ರವರ ಮಾತನ್ನು ಇಮಾಮ್ ಬುಖಾರಿ ವರದಿ ಮಾಡಿದ್ದಾರೆ.

ನಮಾಝ್ ಗೆ ಪ್ರತಿಫಲವಿದ್ದಂತೆ ಸಮಾಲೋಚನೆಗೂ ಪ್ರತಿಫಲವಿದೆ ಎಂದು ಖುರ್'ಆನ್ ಕಲಿಸಿ ಕೊಟ್ಟಿದೆ.
وَالَّذِينَ اسْتَجَابُوا لِرَبِّهِمْ وَأَقَامُوا الصَّلَاةَ وَأَمْرُهُمْ شُورَى بَيْنَهُمْ وَمِمَّا رَزَقْنَاهُمْ يُنْفِقُونَ [الشورى : 38]

ಸತ್ಯವಿಶ್ವಾಸಿಗಳು ತಮ್ಮ ಕಾರ್ಯಗಳಲ್ಲಿ ಸಮಾಲೋಚನೆ ನಡೆಸುವರು ಎಂದು ಸೂರತುಶ್ಸೂರ ದ 38 ನೇ ಸೂಕ್ತದಲ್ಲಿದೆ.
وَشَاوِرْهُمْ فِي الأمْرِ فَإِذَا عَزَمْتَ فَتَوَكَّلْ عَلَى اللَّهِ.
ನಿಮ್ಮ ಕಾರ್ಯಗಳಲ್ಲಿ ಸಮಾಲೋಚನೆ ನಡೆಸಿರಿ.ನಂತರ ದೃಢ ತೀರ್ಮಾನಗೈದು ಅಲ್ಲಾಹನಿಗೆ ತವಕ್ಕುಲ್ ಮಾಡಿರಿ
(ಆಲು ಇಂಮ್ರಾನ್ 159)
 ಎಂದು ಖುರ್'ಆನ್ ಹೇಳಿದೆ.

ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಪ್ರಮುಖ ಕಾರ್ಯಗಳಲ್ಲಿ ಸಮಾಲೋಚನೆ ನಡೆಸುತ್ತಿದ್ದರು.ಬದ್ರ್ ,ಉಹ್ದ್ ಯುದ್ಧಕ್ಕೆ ಹೊರಡುವ ವೇಳೆ ಸಮಾಲೋಚನೆ ನಡೆಸಿದ್ದು,ನಮಾಝ್ ಗೆ ಮಸೀದಿಗೆ ಆಹ್ವಾನಿಸಲು ಯಾವ ಮಾರ್ಗ ಸ್ವೀಕರಿಸಬೇಕೆಂದು ಸಮಾಲೋಚನೆ ನಡಿಸಿದ್ದು ಚರಿತ್ರೆಗಳಲ್ಲಿ ಬಹಳ ಪ್ರಸಿದ್ಧವಾಗಿದೆ.

ಕಾರ್ಯಕ್ರಮದ ಮುಂಚೆ ಸಮಾಲೋಚನೆ ನಡೆಸಿ ಒಂದೊಂದು ಕೆಲಸಗಳನ್ನು ಮನೆ ಮಂದಿಗೆ ವಹಿಸಿ ಕೊಟ್ಟರೆ ಎಲ್ಲವೂ ಒಬ್ಬನ  ಮೇಲೆ ಭಾರವಾಗುವುದು ತಪ್ಪುತ್ತದೆ.ಮಾತ್ರವಲ್ಲ ಅದರಿಂದ ಮನೆ ಮಂದಿಗೂ ಹೊಸ ಅನುಭವ ಲಭಿಸುತ್ತದೆ.

(ಮನೆಯಲ್ಲಿ ನಡೆಸುವ ಸಭೆ-ಸಮಾರಂಭ ಹೇಗೆ ಪ್ಲಾನ್ ಮಾಡಬಹುದು ಎಂಬುವುದನ್ನು ಮುಂದಿನ ಭಾಗದಲ್ಲಿ ನಿರೀಕ್ಷಿಸಿ)



*ಎಲ್ಲರಿಗೂ ಶೇರ್ ಮಾಡಿ*

ತಪ್ಪಿದ್ದರೆ ನನ್ನ ಗಮನಕ್ಕೆ ತನ್ನಿ.
+919902623313
( ವಾಟ್ಸಪ್ ಮಾತ್ರ)


ಮುಂದುವರಿಯುವುದು........

No comments:

Post a Comment