🔰♻ *ನೆಬಿದಿನ ವಿರೋಧಿಗಳ ಕುತಂತ್ರಕ್ಕೆ ಬಲಿಯಾಗದಿರಿ* ♻🔰
*✍🏻 ಸಿರಾಜುದ್ದೀನ್ ನಿಝಾಮಿ ಕೂಳೂರು.*
ಝಕರಿಯ ಸ್ವಲಾಹಿ ಎಂಬ ಜಿನ್ನ್ ವಿಭಾಗದ ಸಲಫೀ ನೇತಾರ ಮದೀನಾದಿಂದ ಹರಿಯಬಿಟ್ಟ ನೆಬಿ ದಿನಾಚರಣೆಯನ್ನು ವಿರೋಧಿಸುವ 2:09 ನಿಮಿಷಗಳ ಒಂದು ವಾಯ್ಸ್ ಕ್ಲಿಪ್ ಕೇಳಲು ಸಾಧ್ಯವಾಯಿತು. ಆತ ಅದರಲ್ಲಿ ಹೇಳುವ ಪ್ರಧಾನ ವಿಷಯ ಏನೆಂದರೆ,
"ನಾವು ಮಾಡುವ ವ್ಯಾಪಾರ, ಕೃಷಿ ಮುಂತಾದ ಮುಆಮಲಾತ್ (ವ್ಯವಹಾರಗಳು) ಸರಿಯಾಗಬೇಕಾದರೆ ನೆಬಿ(ಸ್ವ) ಮತ್ತು ಸ್ವಹಾಬತ್ ವಿರೋಧಿಸದಿದ್ದರೆ ಸಾಕು, ನೆಬಿ(ಸ್ವ) ಹಾಗೂ ಸ್ವಹಾಬತ್ ಆ ಕೃಷಿ, ವ್ಯಾಪಾರ ಮಾಡಿದ್ದಾರೆ ಎಂದು ಸಾಬೀತಾಗಬೇಕೆಂದಿಲ್ಲ. ಆದರೆ ಇಬಾದತ್'ಗಳು ಹಾಗಲ್ಲ. ಅದು ಸರಿಯಾಗಬೇಕಾದರೆ ನೆಬಿ(ಸ್ವ) ಮತ್ತು ಸ್ವಹಾಬತ್ ವಿರೋಧಿಸಿಲ್ಲ ಎಂಬುದು ಮಾತ್ರ ಸಾಲದು. ಅವರು ಅದನ್ನು ಮಾಡಿದ್ದಾಗಿಯೂ ಸಾಬೀತಾಗಬೇಕು"
ಅರ್ಥಾತ್, ಒಂದು ಇಬಾದತ್ ಎಂಬ ವಿಶ್ವಾಸದೊಂದಿಗೆ ಸುನ್ನಿಗಳು ಇಂದು ಮಾಡುತ್ತಿರುವ ನೆಬಿದಿನಾಚರಣೆಯನ್ನು ನೆಬಿ(ಸ್ವ) ಹಾಗೂ ಸ್ವಹಾಬತ್ ಮಾಡಿಲ್ಲ/ಮಾಡಲು ಹೇಳಿಲ್ಲ. ಆದ್ದರಿಂದ ಅದು ಧರ್ಮಸಮ್ಮತವಲ್ಲ ಎಂಬುದು ಆತನ ವಾದಸರಣಿ.
ಹೇಗಿದೆ? ಏನೂ ಗೊತ್ತಿಲ್ಲದ ಬೆಪ್ಪ ಸಲಫಿಗಳು ಭೇಷ್ ಅನ್ನುತ್ತಿರಬಹುದು.
ಸುನ್ನಿಗಳು ಮಾಡುತ್ತಿರುವ ನೆಬಿದಿನಾಚರಣೆಗೆ ಸ್ಪಷ್ಟವಾದ ಪುರಾವೆಯಿಲ್ಲವೆಂದೂ, ನೆಬಿ(ಸ್ವ) ಹಾಗೂ ಸ್ವಹಾಬತ್ ವಿರೋಧಿಸಿಲ್ಲ ಎಂಬ ಕಾರಣಕ್ಕಾಗಿ ಮಾತ್ರ ಸುನ್ನಿಗಳು ನೆಬಿದಿನ ಆಚರಿಸುತ್ತಿರುವುದು ಎಂದು ಚಿತ್ರೀಕರಿಸುವ ಕುಟಿಲ ತಂತ್ರ ಆತನ ಮಾತಿನಲ್ಲಿದೆ.
ಇದು ನಿಜವೇ? ಖಂಡಿತಾ ಅಲ್ಲ. ಬರೀ ನೆಬಿ(ಸ್ವ) ವಿರೋಧಿಸಿಲ್ಲ ಎಂಬ ಕಾರಣಕ್ಕಾಗಿ ಮಾತ್ರವಲ್ಲ ಸುನ್ನಿಗಳು ನೆಬಿದಿನ ಆಚರಿಸುತ್ತಿರುವುದು. ಬದಲಾಗಿ, ಇದಕ್ಕೆ ಖುರ್'ಆನ್, ಹದೀಸ್, ಸ್ವಹಾಬಿ ಚರ್ಯೆ, ಪೂರ್ವಿಕ ಇಮಾಮರು, ವಿದ್ವಾಂಸರು, ಇಷ್ಟರ ತನಕದ ಸಜ್ಜನ ಸರಣಿ ಈ ಎಲ್ಲಾ ಆಧಾರಗಳ ಕಾರಣದಿಂದಾಗಿದೆ ನೆಬಿದಿನ ಆಚರಿಸುತ್ತಿರುವುದು. ಆದ್ದರಿಂದ ಮುಗ್ಧ ಮುಸಲ್ಮಾನರನ್ನು ಗೊಂದಲಕ್ಕೆ ಬೀಳಿಸುವ ಆತನ ವಾದಸರಣಿಯ ಕುತಂತ್ರವನ್ನು ಎಲ್ಲರೂ ಅರಿತಿರಬೇಕಾಗಿದೆ.
"ಮದೀನಾದ ಆಡಳಿತ ನಮ್ಮ ಕೈಗೆ ಸಿಕ್ಕರೆ ನಾವು ಮಾಡುವ ಮೊದಲ ಕೆಲಸ ನೆಬಿ(ಸ್ವ)ರ ರೌಳಾ ಶರೀಫಿನ ಹಸಿರು ಗುಮ್ಮಟ ಹೊಡೆದುರುಳಿಸುವುದು" ಎಂದು ಭಾಷಣ ಮಾಡಿದ್ದ ಆತ ಮದೀನಕ್ಕೆ ಹೋದದ್ದು ನೆಬಿ(ಸ್ವ)ರ ರೌಳಾ ಝಿಯಾರತ್ ಮಾಡಲಂತೂ ಖಂಡಿತಾ ಅಲ್ಲ, ಅದಿರಲಿ.
ಲೋಕಾನುಗ್ರಹಿಯಾಗಿ ಜನಿಸಿದ ಪ್ರವಾದಿ ಮುಹಮ್ಮದ್ (ಸ್ವ) ಎಂಬ ಮಹಾ ವ್ಯಕ್ತಿತ್ವದ ಜನ್ಮ ದಿನದಲ್ಲಿನ ಸಂತೋಷದ ಬಹಿರ್ ಪ್ರಕಟಣೆಯಾಗಿದೆ ನೆಬಿದಿನಾಚರಣೆ. ಆದರೆ ಸಂತೋಷಿಸಬಾರದೆಂದಾಗಿದೆ ಕೆಲವರು ಹೇಳುತ್ತಿರುವುದು, ಭಾಗ್ಯಹೀನರು!!
ನೆಬಿದಿನಾಚರಣೆಗೆ ಲೋಕ ಮುಸ್ಲಿಮರ ಅಂಗೀಕಾರವಿದೆ. ಮುಸ್ಲಿಂ ಲೋಕದ ಇಜ್'ಮಾಅನ್ನು ತಳ್ಳಿ ಹಾಕುವವರು ಕ್ಷಮಾರ್ಹರಲ್ಲ. ನೆಬಿದಿನಾಚರಣೆಯಲ್ಲಿ ನಡೆಯುತ್ತಿರುವುದು ಪ್ರವಾದಿ ಮದ್'ಹ್ ಗಳನ್ನು ಹೇಳುವ ಜಾಥಾಗಳು, ಅವರ ಕೀರ್ತನೆಗಳಾದ ಮೌಲಿದ್, ಅವರ ಮಹತ್ವವನ್ನು ವಿವರಿಸುವ ಭಾಷಣಗಳು, ಹಾಡುಗಳು, ಅನ್ನದಾನ ಹಾಗೂ ಇತರ ಸತ್ಕರ್ಮಗಳಾಗಿವೆ. ಇವೆಲ್ಲಾ ಶಿರ್ಕೆಂದು ಆರೋಪಿಸಿ ತಳ್ಳಿ ಹಾಕಲು ಪರಲೋಕದಲ್ಲಿ ವಿಶ್ವಾಸವಿಲ್ಲದವರಿಂದ ಮಾತ್ರ ಸಾಧ್ಯ.
ಪ್ರವಾದಿ(ಸ್ವ) ತನ್ನ ಜನ್ಮ ದಿನವನ್ನಾಚರಿಸಿದ್ದರೇ...? ನೂತನವಾದಿಗಳು ಹೀಗೆ ಕೇಳುತ್ತಾರೆ. ನಾವು ತಿರುಗಿ ಕೇಳೋಣ. ಪ್ರವಾದಿ(ಸ್ವ) ಆಚರಿಸದ್ದರಿಂದ ಅದು ಬಿದ್'ಅತ್ತಾಗುವುದೇ? ಪ್ರವಾದಿ(ಸ್ವ) ಮಾಡದ್ದೆಲ್ಲವನ್ನೂ ಬಿದ್'ಅತ್ತಾಗಿ ಗಣಿಸುವುದೇ ಮಹಾ ತಪ್ಪು. ಹಾಗಾದರೆ ಉದಾಹರಣೆಗೆ ಈಗ ಇಲ್ಮ್ ಕಲಿಸಲು ಇರುವ ಮದ್ರಸಾ, ಕಾಲೇಜು, ಪತ್ರಿಕೆ, ಧ್ವನಿವರ್ಧಕ ಮುಂತಾದವುಗಳನ್ನೆಲ್ಲಾ ನಿಲ್ಲಿಸಬೇಕಾದೀತು!
ಇಲ್ಮ್ ಕಲಿಯಬೇಕು, ಕಲಿಸಬೇಕೆಂದು ಖುರ್'ಆನ್, ಹದೀಸ್ ಮುಂತಾದ ಪ್ರಮಾಣಗಳ ಮೂಲಕ ಸ್ಪಷ್ಟವಾಗಿರುವಾಗ ಅದು ದೀನಿಗೆ ವಿರುದ್ಧವಲ್ಲದ ಯಾವ ರೂಪದಲ್ಲೂ ಆಗಬಹುದು. ತರಗತಿಗಳು ದಿನಕ್ಕೊಮ್ಮೆ, ವಾರಕ್ಕೊಮ್ಮೆ ಹೇಗೂ ಆಗಬಹುದು. ಕಿತಾಬ್, ನೋಟ್ಸ್, ಸಿಲೆಬಸ್, ಇನ್ಸ್ಪೆಕ್ಷನ್, ಎಕ್ಸಾಂ, ವಾಲ್ಯುವೇಶನ್ ಎಲ್ಲವೂ ಇರಬಹುದು. ಪತ್ರಿಕೆ, ಧ್ವನಿವರ್ಧಕ ಬಳಸಬಹುದು. ತನ್ಮೂಲಕ ನಡೆಯುವುದು ಹೊಸ ಆಚಾರಗಳ ಸೃಷ್ಟಿ ಕರ್ಮವಲ್ಲ, ಹಳೆಯದರ ವಿಕಾಸವಾಗಿದೆ. ಮೂಲ ಆಧಾರಗಳಿಗೆ ಅನುಸಾರವಾದಾಗ ಈ ವಿಕಾಸ ಆಕ್ಷೇಪಾರ್ಹವಲ್ಲ.
ಬೇಕಾದರೆ ಭಾಷಿಕವಾಗಿ ಇದನ್ನು ಬಿದ್'ಅತ್ ಎನ್ನಬಹುದು. ನೆಬಿ(ಸ್ವ)ರ ಕಾಲಾನಂತರ ಜಗತ್ತಿನಲ್ಲುಂಟಾದ ಎಲ್ಲಾ ಬದಲಾವಣೆಗಳೂ ಈ ಗಣದಲ್ಲಿ ಬರುತ್ತವೆ. ಹಾಗಾದಾಗ ಜಗತ್ತಿನಲ್ಲಿ ಈಗಿರುವ ಅಧಿಕವೂ ಬಿದ್'ಅತ್ ಗಳಾಗಿವೆ. ಇವೆಲ್ಲವನ್ನೂ ವಿರೋಧಿಸಲೇ ನೂತನವಾದಿ ಹೊರಟಿರುವುದು?
ಪ್ರವಾದಿ(ಸ್ವ) ಸ್ವತಃ ತನ್ನ ಜನ್ಮದಿನವನ್ನಾಚರಿಸಿದ್ದಕ್ಕೆ ಪುರಾವೆಗಳಿವೆ. ಪ್ರವಾದಿ(ಸ್ವ) ಸ್ವತಃ ಆಚರಿಸದಿದ್ದರೂ ಅದನ್ನು ಬಿದ್'ಅತ್ ಎನ್ನಲು ಸಾಧ್ಯವಿಲ್ಲವೆಂದಾಗಿದೆ ಮೊದಲು ಹೇಳಿದ್ದು. ಇಮಾಂ ಸುಯೂತ್ವೀ (ರ)ರವರ ಫತ್ವಾ ಗಮನಿಸಿ.
ಇಮಾಂ ಸುಯೂತ್ವೀ(ರ)ರೊಂದಿಗೆ ಒಂದು ಪ್ರಶ್ನೆ, "ನೆಬಿದಿನಾಚರಣೆಗೆ ಪುರಾವೆಯಿದೆಯೇ?"
ಅವರ ಉತ್ತರ ಸ್ಪಷ್ಟವಾಗಿತ್ತು.
"ಇಮಾಂ ಬೈಹಖೀ(ರ) ವರದಿ ಮಾಡಿದ ಹದೀಸ್ ನೆಬಿದಿನಾಚರಣೆಗೆ ಪುರಾವೆಯಾಗಿದೆ. ಅನಸ್(ರ) ಹೇಳಿದರು: ಪ್ರವಾದಿತ್ವ ಲಭಿಸಿದ ನಂತರ ಸ್ವಶರೀರಕ್ಕಾಗಿ ನೆಬಿ(ಸ್ವ) ಅಖೀಖಾ ನೀಡಿದ್ದರು. ಜನನದ ಏಳನೇ ದಿನ ಅಬ್ದುಲ್ ಮುತ್ತಲಿಬ್ ಅಖೀಖಾ ನೀಡಿದ್ದು ಹದೀಸಿನಲ್ಲಿದೆ. ಅಖೀಖಾ ಆವರ್ತಿಸಲ್ಪಡುವಂತದ್ದಲ್ಲ. ಅದಾಗ್ಯೂ ನೆಬಿ(ಸ್ವ) ಹಾಗೆ ಮಾಡಿದ್ದು ತಾನು ಲೋಕಾನುಗ್ರಹಿಯಾಗಿ ಜನಿಸಿದ್ದಕ್ಕೆ ಕೃತಜ್ಞತೆ ಎಂಬ ನೆಲೆಯಲ್ಲಾಗಿತ್ತು. ತನ್ಮೂಲಕ ನೆಬಿದಿನಾಚರಣೆಯನ್ನು ಪ್ರವಾದಿ(ಸ್ವ) ನಿಯಮವಾಗಿ ಜಾರಿಗೊಳಿಸಿದರು" (ಫತಾವಾ ಸುಯೂತ್ವೀ: 1-196)
ತನ್ನ ಜನನಕ್ಕಾಗಿ ಸಂತೋಷವನ್ನು ವ್ಯಕ್ತಪಡಿಸಬೇಕೆಂದು ನೆಬಿ(ಸ್ವ) ಸ್ವಪ್ರವರ್ತಿಯ ಮೂಲಕ ಕಲಿಸಿ ಕೊಟ್ಟರು.
*ಖುರ್'ಆನಿನ ಆಧಾರ:*
ಅಲ್ಲಾಹು ಹೇಳುತ್ತಾನೆ: "ಹೇಳಿರಿ, ಅಲ್ಲಾಹನ ಔದಾರ್ಯ (ಫಳ್'ಲ್) ಹಾಗೂ ಅನುಗ್ರಹ (ರಹ್ಮತ್) ಗಳಲ್ಲಿ ಅವರು ಸಂತೋಷಪಡಲಿ"
(ಸೂರಃ ಯೂನುಸ್: 57,58)
ಈ ಆಯತ್'ನಲ್ಲಿ ಹೇಳಿದ ರಹ್ಮತ್ ಎಂಬುದರ ಉದ್ದೇಶ ಪ್ರವಾದಿ(ಸ್ವ) ಎಂದು ಖುರ್'ಆನಿನ ಅಧಿಕೃತ ವ್ಯಾಖ್ಯಾನಕಾರರು ಸ್ಪಷ್ಟಪಡಿಸಿದ್ದಾರೆ.
(ರೂಹುಲ್ ಮ'ಆನೀ: 6-141,
ಅದ್ದುರ್ರುಲ್ ಮನ್ಸೂರ್: 4-367,
ಅಲ್ ಬಹ್ರುಲ್ ಮುಹೀತ್ವ್: 5-161)
ಖುರ್'ಆನಿನಲ್ಲಿ ಮತ್ತೊಂದು ಕಡೆ ನೆಬಿ(ಸ್ವ)ರನ್ನು ರಹ್ಮತ್ ಎಂದು ಅಲ್ಲಾಹನು ನೇರವಾಗಿಯೇ ಹೇಳಿದ್ದಾನೆ.
"ಲೋಕಕ್ಕೆ ಅನುಗ್ರಹವಾಗಿಯಲ್ಲದೆ ತಮ್ಮನ್ನು ನಾವು ನಿಯೋಗಿಸಿಲ್ಲ"
(ಸೂರಃ ಅಂಬಿಯಾಅ್: 107)
ಇಮಾಂ ಖಸ್ತಲ್ಲಾನೀ(ರ) ರವರು ಉಲ್ಲೇಖಿಸುತ್ತಾರೆ: "ಇಸ್ಲಾಮಿನ ಜನರು ಪ್ರವಾದಿ(ಸ್ವ)ರ ಜನ್ಮ ಮಾಸದಲ್ಲಿ ಒಂದುಗೂಡಿ ಪ್ರತ್ಯೇಕ ಔತಣ ಏರ್ಪಡಿಸುತ್ತಿದ್ದರು. ಆ ತಿಂಗಳ ರಾತ್ರಿಗಳಲ್ಲಿ ವಿಭಿನ್ನ ದಾನಧರ್ಮಗಳು, ಸಂತೋಷ ಪ್ರಕಟಣೆ, ಸತ್ಕರ್ಮಗಳ ಹೆಚ್ಚಳ, ಮೌಲಿದ್ ಪಾರಾಯಣ ಮುಂತಾದವುಗಳಲ್ಲಿ ವಿಶೇಷ ಗಮನ ಹರಿಸುತ್ತಿದ್ದರು"
(ಅಲ್ ಮವಾಹಿಬುಲ್ಲದುನ್ನಿಯ್ಯಾ: 1-132)
*ಹದೀಸಿನ ಆಧಾರ:*
ಇಮಾಂ ಬುಖಾರೀ(ರ) ರಿಂದ ವರದಿ: ಅಬೂಲಹಬ್ ಮರಣಿಸಿದಾಗ ಕುಟುಂಬದ ಕೆಲವರು ಕೆಟ್ಟ ಸ್ಥಿತಿಯಲ್ಲಿ ಆತನನ್ನು ದರ್ಶಿಸಿದರು. ಆತನ ಅವಸ್ಥೆಯ ಬಗ್ಗೆ ಕೇಳಿದಾಗ ಆತ ಹೇಳಿದ: "ನಿಮ್ಮ ನಂತರ ನಾನು (ಒಳ್ಳೆಯದಾಗಿ) ಏನೂ ಕಂಡಿಲ್ಲ. ಆದರೆ ನಿಶ್ಚಯವಾಗಿಯೂ ನನಗೆ ಈ ಎರಡು ಬೆರಳುಗಳೆಡೆಯ ಮೂಲಕ ಕುಡಿಯಲು ದೊರೆಯುತ್ತಿದೆ. ಸುವೈಬತ್ತನ್ನು ವಿಮೋಚಿಸಿದ್ದರಿಂದ"
ಸುಹೈಲೀ(ರ) ಅಬ್ಬಾಸ್(ರ)ರಿಂದ ವರದಿ ಮಾಡಿದ ಹದೀಸಿನಲ್ಲಿ ಹೀಗಿದೆ. ಅವರು ಹೇಳಿದರು: ಅಬೂಲಹಬ್ ಮರಣ ಹೊಂದಿ ಒಂದು ವರ್ಷ ಕಳೆದಾಗ ನಾನವರನ್ನು ಸ್ವಪ್ನದಲ್ಲಿ ಕಂಡೆ. ಅವರೆಂದರು: "ನಿಮ್ಮಿಂದ ಬೇರ್ಪಟ್ಟ ನಂತರ ನಾನೊಂದು ಸುಖವನ್ನೂ ಅನುಭವಿಸಿಲ್ಲ. ಆದರೆ ಪ್ರತಿ ಸೋಮವಾರ ನನಗೆ ಶಿಕ್ಷೆಯಲ್ಲಿ ರಿಯಾಯಿತಿ ದೊರೆಯುತ್ತಿದೆ". ಅಬ್ಬಾಸ್(ರ) ಹೇಳುತ್ತಾರೆ: "ಸೋಮವಾರ ನೆಬಿ(ಸ್ವ)ರ ಜನನವಾದಾಗ ಈ ಸಂತೋಷ ವಾರ್ತೆಯನ್ನು ಸುವೈಬತ್ ಅಬೂಲಹಬನಿಗೆ ತಿಳಿಸಿದರು. ಆಗ ಆತ ಅವರನ್ನು ದಾಸ್ಯಮುಕ್ತಿಗೊಳಿಸಿದ. ಇದೇ ಶಿಕ್ಷೆಯಲ್ಲಿ ಕಡಿತವುಂಟಾಗಲು ಕಾರಣ" (ಫತ್ಹುಲ್ ಬಾರೀ: 11-403).
👉🏼ಇಬ್ನು ಹಜರಿನಿಲ್ ಅಸ್ಖಲಾನೀ(ರ), ಇಬ್ನು ಕಸೀರ್ ಎಂಬವರೂ ಇದೇ ರೀತಿ ಉಲ್ಲೇಖಿಸಿದ್ದಾರೆ.
👉🏼ಕಾಫಿರ್'ಗಳಿಂದ ಸತ್ಕರ್ಮಗಳು ಸ್ವೀಕೃತವಾಗುವುದೋ, ಪ್ರತಿಫಲ ದೊರಕುವುದೋ ಇಲ್ಲವೆಂದು ಹೇಳುವ ವಿದ್ವಾಂಸರು ಸಹ, ಪ್ರವಾದಿ(ಸ್ವ)ರನ್ನು ಪ್ರೀತಿಸಿದರೆ ಕಾಫಿರ್'ಗೂ ಒಳಿತುಂಟಾಗುವುದೆಂದು ಈ ಹದೀಸ್ ಆಧಾರವಾಗಿಸಿ ವಿವರಿಸುತ್ತಾರೆ (ಫತ್ಹುಲ್ ಬಾರೀ: 11-403)
👉🏼ಅಬೂಲಹಬನಿಗೆ ಒಳಿತುಂಟಾದದ್ದು ದಾಸ್ಯಮುಕ್ತಿ ಎಂಬ ಪ್ರವರ್ತಿಯಿಂದಲ್ಲ. ಕಾರಣ, ಕಾಫಿರನಿಂದ ಸತ್ಕರ್ಮಗಳು ಸ್ವೀಕೃತವಲ್ಲ. ಪರಂತು ನೆಬಿವರ್ಯ(ಸ್ವ)ರೊಂದಿಗಿನ ಸ್ನೇಹದಿಂದ ಮಾತ್ರ ಎಂದು ವಿದ್ವಾಂಸರು ವಿವರಿಸಿದ್ದಾರೆ.
👉🏼ಅಬೂಲಹಬನನ್ನು ಸ್ವಪ್ನದಲ್ಲಿ ದರ್ಶಿಸಿದ್ದು ಸ್ವಹಾಬಿ ಪ್ರಮುಖರೂ, ಪ್ರವಾದಿ(ಸ್ವ)ರ ಚಿಕ್ಕಪ್ಪನೂ ಆದ ಅಬ್ಬಾಸ್(ರ) ಆಗಿದ್ದಾರೆ (ಫತ್ಹುಲ್ ಬಾರೀ: 11-403)
ಫಿರ್'ಔನ್ ಮತ್ತು ಕಿಂಕರರನ್ನು ನದಿಯಲ್ಲಿ ಮುಳುಗಿಸಿ ನಾಶಪಡಿಸಿದ 'ಅನುಗ್ರಹ' ಸ್ಮರಿಸಿ ಬನೂ ಇಸ್ರಾಈಲರು ಮುಹರ್ರಂ ಹತ್ತನ್ನು ಗೌರವಿಸಿದ ಹಾಗೂ ನೆಬಿ(ಸ್ವ)ರೂ ಆ ಗೌರವ ಪ್ರಕಟಿಸಿ ವೃತಾನುಷ್ಠನ ಸುನ್ನತ್ ಮಾಡಿದ ಹದೀಸ್ ಆಧಾರವಾಗಿಸಿ ಹಾಫಿಳ್ ಇಬ್ನು ಹಜರ್(ರ) ಪ್ರಸ್ತಾವಿಸಿದ್ದಾಗಿ ಇಮಾಂ ಸುಯೂತ್ವೀ (ರ) ಉಲ್ಲೇಖಿಸುತ್ತಾರೆ: "ಒಂದು ನಿಶ್ಚಿತ ದಿನದಲ್ಲಿ ಅಲ್ಲಾಹನಿಂದ ಅನುಗ್ರಹವೊಂದು ಲಭಿಸಿದರೆ ಪ್ರತೀ ವರ್ಷ ಆ ದಿನ ಬರುವಾಗ ಅದಕ್ಕೆ ಕೃತಜ್ಞತೆ ಅರ್ಪಿಸಬೇಕೆಂದು ಈ ಹದೀಸ್ ತಿಳಿಸುತ್ತದೆ. ನೆಬಿ(ಸ್ವ) ರಬೀಉಲ್ ಅವ್ವಲ್ ಹನ್ನೆರಡರಂದು ಜನಿಸಿದರೆಂಬ ಅನುಗ್ರಹಕ್ಕಿಂತ ದೊಡ್ಡ ಅನುಗ್ರಹ ಬೇರೇನಿದೆ? ಆದ್ದರಿಂದ ಆ ದಿನವನ್ನೇ ಪ್ರತ್ಯೇಕವಾಗಿ ಗಣಿಸಿ ಕೃತಜ್ಞತೆ ಅರ್ಪಿಸಬೇಕು. ಇದನ್ನು ನೆಬಿದಿನಾಚರಣೆಗೆ ಒಂದು ಮೂಲಾಧಾರವಾಗಿ ಪರಿಗಣಿಸಬಹುದು" (ಅಲ್ ಹಾವೀ ಲಿಲ್ ಫತಾವಾ: 1-196)
ನೆಬಿದಿನಾಚರಣೆಯ ರೂಪವನ್ನು ಇಮಾಂ ಸುಯೂತ್ವೀ (ರ) ವಿವರಿಸುವುದು ಹೀಗೆ: "ಖುರ್'ಆನ್ ಪಾರಾಯಣ, ನೆಬಿ(ಸ್ವ)ರ ಮದ್'ಹ್ ಪಾರಾಯಣ, ಸ್ವದಖಾ, ಅನ್ನದಾನ ಮುಂತಾದವುಗಳಿಂದ ಧನ್ಯವಾದದ್ದೂ, ಸತ್ಕರ್ಮಗಳತ್ತ ಜನರ ಗಮನವನ್ನು ಸೆಳೆಯುವಂತದ್ದೂ ಆಗಿರಬೇಕು ನೆಬಿದಿನಾಚರಣೆ" (ಫತಾವಾ ಸುಯೂತ್ವೀ: 1-196)
ಇಸ್ಮಾಈಲುಲ್ ಹಿಖ್ಖೀ(ರ) ಹೇಳುತ್ತಾರೆ: "ನೆಬಿ (ಸ್ವ)ರ ಜನ್ಮ ದಿನದಲ್ಲಿ ಕೃತಜ್ಞತೆ ಅರ್ಪಿಸುವುದು ಸುನ್ನತ್ತಾಗಿದೆ"
(ರೂಹುಲ್ ಬಯಾನ್ 9-56)
ಇಮಾಂ ನವವೀ(ರ)ರವರ ಉಸ್ತಾದರಾದ ಅಬೂಶಾಮ(ರ) ಹೇಳುತ್ತಾರೆ: "ನೆಬಿ(ಸ್ವ)ರ ಜನ್ಮದಿನದಲ್ಲಿ ಮಾಡುವ ಸತ್ಕರ್ಮಗಳು, ದಾನಧರ್ಮಗಳು, ಸಂತೋಷಾಚರಣೆ ಇತ್ಯಾದಿಗಳು ಒಳ್ಳೆಯ ಸಂಪ್ರದಾಯಗಳಾಗಿವೆ"
(ಅಲ್ ಬಾಇಸ್: 230)
ಇಮಾಂ ಶೈಬಾನೀ(ರ) ಹೇಳುತ್ತಾರೆ: " ನೆಬಿ(ಸ್ವ) ಜನಿಸಿದ ದಿನ ಆಚರಿಸಲ್ಪಡಲು ಅತ್ಯಂತ ಅರ್ಹವಾಗಿದೆ "
(ಹದಾಇಖುಲ್ ಅನ್ವಾರ್: 1-190)
'ನೆಬಿ(ಸ್ವ) ವಫಾತಾದ ದುಃಖ ಮಾಸವೂ ಅಲ್ಲವೇ ರಬೀಉಲ್ ಅವ್ವಲ್?' ಎಂಬ ಪ್ರಶ್ನೆಗೆ ಇಮಾಂ ಸುಯೂತ್ವೀ (ರ) ಉತ್ತರಿಸುತ್ತಾರೆ: "ನಿಶ್ಚಯವಾಗಿಯೂ ನೆಬಿ(ಸ್ವ)ರ ಜನನ ನಮಗೆ ಲಭಿಸಿದ ಅತ್ಯಂತ ದೊಡ್ಡ ಅನುಗ್ರಹವಾಗಿದೆ. ನೆಬಿ(ಸ್ವ)ರ ವಫಾತ್ ನಮಗೆ ಉಂಟಾದ ಅತ್ಯಂತ ದೊಡ್ಡ ಮುಸೀಬತ್ ಸಹಾ ಹೌದು. ಅನುಗ್ರಹಗಳಿಗೆ ಕೃತಜ್ಞತೆ ಅರ್ಪಿಸಲೂ, ಮುಸೀಬತ್ ಗಳಿಗೆ ಸಹನೆ ಪಾಲಿಸಲೂ ಆಗಿದೆ ಶರೀಅತ್ ಆಜ್ಞಾಪಿಸುವುದು" (ಅಲ್ ಹಾವೀ ಲಿಲ್ ಫತಾವಾ: 1-256)
ಕೊನೆಗೊಂದು ಮಾತು, ನೆಬಿದಿನ ಆಗಮಿಸುವಾಗ ಎಂದಿಗಿಂತ ಹೆಚ್ಚಾಗಿ ಮುಸ್ಲಿಂ ಲೋಕವು ಆಹ್ಲಾದ ವ್ಯಕ್ತಪಡಿಸುತ್ತದೆ. ಟೀಕೆಗಳೊಂದಿಗೆ ಪ್ರವಾದಿ ಕೀರ್ತನೆಗಳಿಂದ ದೂರ ನಿಲ್ಲುವವರು ಮತ್ತೆ ಯಾವಾಗ ಅದನ್ನು ನಿರ್ವಹಿಸುತ್ತಾರೆ? ನೆಬಿ(ಸ್ವ)ರ ಮದ್'ಹ್ ಹೇಳಬಹುದೆಂದೂ, ಅದು ರಬೀಉಲ್ ಅವ್ವಲ್ ಹನ್ನೆರಡರಂದು ಸಲ್ಲದೆಂದೂ ಹೇಳುವವರು ಬೇರೆ ಯಾವ ಸಂದರ್ಭದಲ್ಲೂ ಮದ್'ಹ್ ಕೀರ್ತನೆಗಳನ್ನು ನಡೆಸುವುದಿಲ್ಲ. ಇವರಿಗೆ ನೆಬಿದಿನದ ಆಗಮನವೇ ಒಂಥರಾ ಬೇಜಾರಾಗಿದೆ. ಅಲ್ಲದಿದ್ದರೂ ನೆಬಿ(ಸ್ವ)ರು ದಿನಾ ನೂರು ಪಾಪ ಮಾಡುವ ಮಹಾ ಪಾಪಿ ಎಂದು ಕರೆಯುವವರಿಗೆ ಬೇರೇನು ಮಾಡಲಾದೀತು?
🖋 *ಸಿರಾಜುದ್ದೀನ್ ನಿಝಾಮಿ ಕೂಳೂರು*
No comments:
Post a Comment