*ಝಿಯಾರತ್ತ್ ಕೇಂದ್ರ*
👉👉 8️⃣3️⃣
➖➖➖➖➖➖➖
*ವೆಳಿಯಂಗೋಡ್ ಉಮರ್ ಖಾಝಿ (ರ)*
*ವೆಳಿಯಂಗೋಡು, ಮಲಪ್ಪುರಂ.*
*********************
اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ
☪☪☪☪☪☪☪
✍ ಗಫೂರ್ ಬಾಯಾರ್
**********************
ಸುಮಾರು 300 ವರ್ಷಗಳ ಕಾಲ ಭಾರತೀಯರನ್ನು ಗುಲಾಮರನ್ನಾಗಿಸಿಕೊಂಡು ದುರಾಡಳಿತ ನಡೆಸಿದ ಬ್ರಿಟಿಷರ ವಿರುದ್ಧ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ 1920ರ ನಂತರ ಆರಂಭವಾದ ಅಸಹಕಾರ ಚಳುವಳಿಗೂ ಮುನ್ನವೇ ಅಂದರೆ 17ನೇ ಶತಮಾನದಲ್ಲಿ ಬ್ರಿಟಿಷರ ಅನ್ಯಾಯದ ತೆರಿಗೆ ಪದ್ದತಿಯ ವಿರುದ್ಧ ಕಾನೂನು ಅಸಹಕಾರ ಚಳುವಳಿಯಲ್ಲಿ ಮುಂಚೂಣಿಯ ನಾಯಕರಾಗಿ ಪಾಲ್ಗೊಂಡು ಜೈಲುವಾಸ ಅನುಭವಿಸಿದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಲ್ಲೊಬ್ಬರಾಗಿದ್ದಾರೆ ವೆಳಿಯಂಗೋಡು ಉಮರ್ ಖಾಝಿ (ರ)
ಕೊಡುಂಗಲ್ಲೂರಿಗೆ ಆಗಮಿಸಿದ ಮಾಲಿಕುಲ್ ಹಬೀಬ್ (ರ)ರವರು ಏರಮತ್ತಾಲ್ ಇಲ್ಲತ್ತ್ನ ಸೂಫಿವರ್ಯರಾದ ಹುಸೈನ್ (ರ) ಪರಂಪರೆಯ ತಾನೂರ್ ಖಾಝಿಯಾರಕತ್ತ್ ಆಲಿ ಮುಸ್ಲಿಯಾರ್ (ರ) ಮತ್ತು ವೇಳಿಯಂಗೋಡು ಕಾಕತ್ತರ ವೀಟಿಲ್ ಆಮಿನಾ (ರ) ಎಂಬ ದಂಪತಿಗಳ ದ್ವಿತೀಯ ಪುತ್ರನಾಗಿ ಕೇರಳದ ಮಲಪ್ಪುರಂ ಜಿಲ್ಲೆಯ ಪೊನ್ನಾನಿ ಎಂಬಲ್ಲಿ 1765ರಲ್ಲಿ ಜನಿಸಿದರು.
ಪ್ರಾಥಮಿಕ ವಿದ್ಯಾಭ್ಯಾಸದ ನಂತರ ಪೊನ್ನಾನಿಯ ವಲಿಯ ಜಮಾಅತ್ ಮಸೀದಿಯ ಖಾಝಿಯಾದ ಮಮ್ಮಿಕುಟ್ಟಿ (ಖ.ಸಿ) ಯವರಿಂದ ವಿದ್ಯಾರ್ಜನೆ ಮಾಡಿದ ನಂತರ ತಾನೂರ್, ಪೊನ್ನಾನಿ ಮತ್ತು ವೆಳಿಯಂಗೋಡು ಪಳ್ಳಿ ದರ್ಸ್ಗಳಲ್ಲಿ ಹಲವಾರು ವರ್ಷಗಳ ಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು.
ಹಿಜರಿ 1218ರಲ್ಲಿ ವೆಳಿಯಂಗೋಡಿನ ಖಾಝಿಯಾಗಿ ನೇಮಿಸಲ್ಪಟ್ಟರು. ಅನಂತರ ಪುನಿಯೂರ್ಕುಳಂ, ಕೋಡಂಚೇರಿ, ಚಾವಕ್ಕಾಡ್, ಚೆಟ್ಟುವ, ಕೂತ್'ಪರಮ್ನಲ್ಲೂ ಖಾಝಿಯಾಗಿ ಸೇವೆ ಸಲ್ಲಿಸಿದರು.
ಹೆಸರಾಂತ ವಿದ್ವಾಂಸರು ಸೂಫಿವರ್ಯರೂ ಆಗಿದ್ದ ಅವರು ತಮ್ಮ ಸೇವೆಯನ್ನು ಧಾರ್ಮಿಕ ರಂಗಕ್ಕಷ್ಟೇ ಸೀಮಿತವಾಗೊಳಿಸದೆ, ಕವಿಯಾಗಿ, ಸ್ವಾತಂತ್ರ್ಯ ಸಮರ ಸೇನಾನಿಯಾಗಿ, ರಾಜಕೀಯ ಮುತ್ಸದ್ಧಿಯಾಗಿ ಹೀಗೆ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸುತ್ತಾ ಮಹತ್ತರವಾದ ಸಾಧನೆ ಮಾಡಿದ ಹೆಗ್ಗಳಿಕೆ ಹೊಂದಿದ್ದರು.
ನಿಮಿಷ ಕವಿಯಾಗಿದ್ದ ವೆಳಿಯಂಗೋಡು ಉಮರ್ ಖಾಝಿ (ರ) ರವರು, ಮಲಯಾಳಂ ಮತ್ತು ಅರಬಿಯಲ್ಲಿ ಹಲವಾರು ಪದ್ಯಗಳನ್ನು ರಚಿಸಿದ್ದಾರೆ. ವಿವಾಹ ಕೌಟುಂಬಿಕ ಜೀವನ ಮತ್ತು ವಿವಾಹ ವಿಮೋಚನೆಯ ವಿಷಯವನ್ನು ಒಳಗೊಂಡ *ಮಖಾಸ್ವಿದುನ್ನಿಖಾಹ್* ಪ್ರವಾದಿ ﷺِ ಚರಿತ್ರೆ ಮತ್ತು ಕೀರ್ತನೆಗಳನ್ನೊಳಗೊಂಡ *ನಫಾಇಸುದ್ದುರರ್* ನಬಿ ﷺِರ ಮದ್ಹ್ ಕೀರ್ತನೆಯ *ಸ್ವಲ್ಲಿಲ್ ಇಲಾಹು ಬೈತ್* ಪ್ರಮುಖವಾದವುಗಳು. ಮಲಯಾಳಂನ *ಅಡಿಕಣತ್ತ್ ಬೈತ್* ಮತ್ತು ಅರಬಿಯ *ಖಸ್ವೀದತುಲ್ ಉಮರಿಯ್ಯಾ* ಹೆಸರಾಂತ ಮತ್ತು ಜನಪ್ರಿಯ ರಚನೆಗಳಾಗಿವೆ.
ನಾಲ್ಕು ಬಾರಿ ಹಜ್ ನಿರ್ವಹಿಸಿದ್ದ ಅವರು ದೇಶ-ವಿದೇಶಗಳ ಹೆಸರಾಂತ ಇಸ್ಲಾಮಿಕ್ ವಿದ್ವಾಂಸರೊಂದಿಗೆ ಆತ್ಮೀಯವಾದ ಸ್ನೇಹ ಬಾಂಧವ್ಯವನ್ನು ಹೊಂದಿದ್ದರು.
ಇಮಾಂ ಸ್ವಾವಿ (ರ), ಶರ್'ಖಾವಿ (ರ), ದರ್'ದಿರ್ (ರ), ಫಾಳಲಿ (ರ), ದಿಮ್ಯಾಥಿ (ರ), ಬಾಜೂರಿ (ರ), ಬಜೈರಿಮಿ (ರ), ಹಸನುಲ್ ಅಥ್ವಾರ್ (ರ), ಮೊದಲದವರೊಂದಿಗೆ ಹತ್ತಿರದ ಬಾಂಧವ್ಯವನ್ನು ಹೊಂದಿದ್ದರು.
ಆಧ್ಯಾತ್ಮಿಕ ಶಿಖರಗಳಂತಹ ಕುತುಬುಝ್ಝಮಾನ್ ಮಂಬುರಂ ಸಯ್ಯದಲವಿ ತಂಙಳ್ (ರ), ಕಲ್ಲಿಕೋಟೆ ಶೈಖ್ ಜಿಫ್ರಿ (ರ), ಕಣ್ಣೂರು ಮೌಲಲ್ ಬುಖಾರಿ (ರ), ಕಡಲುಂಡಿ ಜಮಲುಲೈಲ್ಲಿ (ರ), ಚಾವಕ್ಕಾಡ್ ಅಹ್ಮದುಲ್ ಬುಖಾರಿ (ರ), ಉಮರುಲ್ ಖಾಹಿರಿ (ರ), ಅಬ್ದುಲ್ ಅಝಿಝುದ್ದಅ್ಲವಿ (ರ) ಮುಂತಾದ ಆಧ್ಯಾತ್ಮಿಕ ಶಿಖರಗಳಂತಹ ಮಹಾನರುಗಳೊಂದಿಗೆ ಹತ್ತಿರದ ಒಡನಾಟವನ್ನು ಹೊಂದಿದ್ದರು.
ಸದಾ ಇಲಾಹಿ ಸ್ಮರಣೆಯಲ್ಲಿ ತೊಡಗಿರುತ್ತಿದ್ದ ಮಹಾನರು ಆಧ್ಯಾತ್ಮಿಕ ಸೇವೆಯ ಜೊತೆಗೆ ಬ್ರಿಟಿಷ್ ವಿರುದ್ಧದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದರು.
*ಬ್ರಿಟಿಷ್ ವಿರುದ್ಧ ಹೋರಾಟ..*
ಟಿಪ್ಪು ಸುಲ್ತಾನ್ (ರ)ರವರನ್ನು ಬ್ರಿಟೀಷರು ಮೇೂಸದಿಂದ ವಧಿಸಿದ ನಂತರ ಅಂದರೆ ಮಲಬಾರಿನಲ್ಲಿ ಟಿಪ್ಪು ಸುಲ್ತಾನರ ಆಳ್ವಿಕೆ ಕೊನೆಗೊಂಡ ನಂತರ ಮಲಬಾರನ್ನು ಆಕ್ರಮಿಸಿಕೊಂಡ ಬ್ರಿಟೀಷರ ವಿರುದ್ಧ ಉಮರ್ ಖಾಝಿ(ರ)ರಿಗೆ ಬೇಸರವಿದ್ದರೂ ಅಷ್ಟು ದ್ವೇಷವಿರಲಿಲ್ಲ
ಕಾರಣ ಆಗ ಈಸ್ಟ್ ಇಂಡಿಯಾ ಕಂಪನಿಯ ಬಹುಪಾಲು ನೌಕರರು ಮಾಪಿಳರೆಂದು ಕರೆಯಲ್ಪಡುವ ಮಲಬಾರಿನ ಮುಸ್ಲಿಮರಾಗಿದ್ದರು. ಅನಂತರ ಬ್ರಿಟಿಷರು ವಿಧಿಸಿದ ಭೂ ತೆರಿಗೆ ಪದ್ಧತಿಯಿಂದಾಗಿ ಬ್ರಿಟಿಷರ ಕಡು ವೈರಿಯಾಗಿ ಬದಲಾದರು.
ಕಾರಣ ಅಲ್ಲಾಹನ ಭೂಮಿಗೆ ತೆರಿಗೆ ವಿಧಿಸುವುದು ಅನ್ಯಾಯ ಎನ್ನುವುದು ಅವರ ನಿಲುವಾಗಿತ್ತು. ಈ ಕಾರಣವೇ ಬ್ರಿಟಿಷರ ವಿರುದ್ಧದ ಹೋರಾಟಕ್ಕೆ ಕಾರಣವಾಯಿತು.
ವೆಳಿಯಂಗೋಡು ಉಮರ್ ಖಾಝಿ (ರ) ಬ್ರಿಟಿಷ್ ವಿರುದ್ಧ ಹೋರಾಟಕ್ಕೆ ಧುಮುಕಿದ ನಂತರ 1772ರಿಂದ 1822ರ ಮಧ್ಯೆ ಮಲಬಾರಿನಲ್ಲಿ ಬ್ರಿಟಿಷ್ ವಿರುದ್ಧ 83 ದಂಗೆಗಳು ನಡೆದಿವೆಯೆಂದು ಸ್ವದರ್ ಅದಾಲತ್ ನ್ಯಾಯಾಲಯಕ್ಕೆ ಅಂದಿನ ಬ್ರಿಟಿಷ್ ಗವರ್ನರ್ ವರದಿ ಕೊಟ್ಟಿದ್ದರು.
ಬ್ರಿಟಿಷ್ ವಿರುದ್ಧದ ಹೋರಾಟಕ್ಕೆ ನೇತೃತ್ವ ನೀಡುತ್ತಿದ್ದುದರಿಂದ ಬ್ರಿಟಿಷ್ ಅಧಿಕಾರಿ ಕಾನೋಲಿ ಎಂಬಾತ ಉಮರ್ ಖಾಝಿ (ರ) ರನ್ನು ಬಂಧಿಸಿ ಗಡಿಪಾರು ಮಾಡಲು ಪ್ರಯತ್ನ ನಡೆಸುತ್ತಿದ್ದ. ಈ ವಿಷಯ ತಿಳಿದ ಉಮರ್ ಖಾಝಿ (ರ)ರು ಬ್ರಿಟಿಷರ ವಿರುದ್ಧದ ಹೋರಾಟವನ್ನು ತೀವ್ರಗೊಳಿಸಿದರು.
ಉಮರ್ ಖಾಝಿ (ರ)ರವರ ಆಸ್ತಿಗೂ ಮಿತಿಮೀರಿದ ತೆರಿಗೆ ಅಥವಾ ಕಂದಾಯ ವಿಧಿಸಿದ್ದರಿಂದ ಕಂದಾಯ ಕಟ್ಟಲು ನಿರಾಕರಿಸಿದರು. ಈ ಕಾರಣದಿಂದ ಮಹಾನರನ್ನು ವಶಕ್ಕೆ ಪಡೆದ ಬ್ರಿಟಿಷ್ ಪೊಲೀಸರು ಚಾವಕ್ಕಡ್ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಧೀಶ ತುಕ್ಟಿನಿಬು ಎಂಬುವನ ಮುಖಕ್ಕೆ ಉಗಿದಿದ್ದರು.
ಇದರಿಂದ ಕುಪಿತನಾದ ಜಡ್ಜ್ ಮಹಾನರಿಗೆ ಜೈಲುವಾಸ ವಿಧಿಸಿದನು. ನ್ಯಾಯಾಲಯದ ಆದೇಶದ ಪ್ರಕಾರ ಮಹಾನರನ್ನು ಜೈಲಿನಲ್ಲಿ ಇರಿಸಲಾಗಿತ್ತು.
ಆದರೆ ವಿಲಾಯತಿನ ಪದವಿಗೇರಿದ ಮಹಾನರು ಅಲ್ಲಾಹನು ನೀಡಿದ ಕರಾಮತ್ತಿನಿಂದಾಗಿ ಬ್ರಿಟಿಷರು ಬಂಧಿಸಿ ಜೈಲಿನ ಸೆಲ್ ಒಂದರಲ್ಲಿ ಕೂಡಿ ಹಾಕಿದ್ದರೂ ಸಹ ಅಲ್ಪ ಹೊತ್ತಿನಲ್ಲೇ ಜೈಲಿನ ಹೊರಗಡೆ ಇದ್ದರು. ಇದನ್ನು ಕಂಡ ಜೈಲಿನ ವಾರ್ಡನ್ ಮಹಾನರನ್ನಿರಿಸಿದ್ದ ಸೆಲ್ಲಿನತ್ತ ಧಾವಿಸಿ ಹೋಗಿ ನೋಡಿದಾಗ ಸೆಲ್ಲಿನ ಬಾಗಿಲು ಭದ್ರವಾಗಿ ಮುಚ್ಚಿ ಹಾಕಲಾಗಿದ್ದ ಬೀಗವೂ ಹಾಗೆಯೇ ಇತ್ತು.
ಆದರೆ ಮಹಾನರು ಪವಾಡ ಸದೃಶ ರೀತಿಯಲ್ಲಿ ಹೊರ ಬಂದಿರುವುದನ್ನು ಕಂಡು ದಂಗಾದ ವಾರ್ಡನ್ಗೆ ಮಹಾನರು ಸಾಮಾನ್ಯರಲ್ಲ ಎಂಬುದು ಮನದಟ್ಟಾದ ಕಾರಣ ತಕ್ಷಣ ಅವರ ಸಮೀಪ ತೆರಳಿ ಅವರ ಕಾಲಿಗೆ ಬಿದ್ದು ದಯವಿಟ್ಟು ತಾವು ಜೈಲಿಗೆ ಬರಬೇಕು ಇಲ್ಲದಿದ್ದರೆ ತನ್ನ ಕೆಲಸದ ಜೊತೆಗೆ ತಲೆಯೂ ಹೋದೀತು ಎಂದು ಅಂಗಲಾಚಿ ಬೇಡಿದ್ದರಿಂದ ಮಹಾನರು ಮತ್ತೆ ಜೈಲಿಗೆ ತೆರಳಿದ್ದರು.
ಜೈಲಿನ ವಾರ್ಡನ್ ಈ ವಿಷಯವನ್ನು ಕಲೆಕ್ಟರ್ನ ಗಮನಕ್ಕೆ ತಂದಾಗ ಕಲೆಕ್ಟರ್, ಉಮರ್ ಖಾಝಿ (ರ) ಯವರಿಗೆ ಒಂದು ಕ್ಷಮಾಪಣಾ ಪತ್ರ ಬರೆದು ಕೊಡುವಂತೆ ಹೇಳಿದರು. ಮಹಾನರು ಅದನ್ನು ನಿರಾಕರಿಸಿದಾಗ ಕೊನೆಗೆ ಕುತುಬುಝ್ಝಮಾನ್ ಮಂಬುರಂ ಸಯ್ಯಿದಲವಿ (ರ) ತಂಙಳರ ಮಧ್ಯಸ್ಥಿಕೆಯಲ್ಲಿ ಮಹಾನರನ್ನು ಯಾವುದೇ ಷರತ್ತಿಲ್ಲದೆ ಬಿಡುಗಡೆಗೊಳಿಸಲಾಯಿತು.
ಹೀಗೆ ಬ್ರಿಟಿಷ್ ಸಾಮ್ರಾಜ್ಯದ ಅನೀತಿಗಳ ವಿರುದ್ಧ ಧೀರ ಹೋರಾಟ ನಡೆಸುತ್ತಾ ಅವರನ್ನು ಸಿಂಹ ಸ್ವಪ್ನದಂತೆ ಕಾಡಿದ್ದ, ಸಮರ ಸೇನಾನಿಯೂ ಧೀರ ಹೋರಾಟಗಾರರೂ ಆಗಿದ್ದ ಶೈಖುನಾರ ಅಂತರಂಗ ಬಹಳ ಮೃದುವಾಗಿತ್ತು.
ಅಂತಹ ಕೆಚ್ಚೆದೆಯ ಆ ಹೋರಾಟಗಾರ ಆಂತರಂಗಿಕವಾಗಿ ತಾಯ ಗರ್ಭದಲ್ಲಿ ಬೆಚ್ಚಗೆ ಸ್ವರ್ಗ ಸುಖ ಅನುಭವಿಸುವ ಮಗುವಿನಂತೆ ಮದೀನಾ ಮುನವ್ವರದ ಒಲವಿನ ಅನುರಾಗದ ಅಲೆಗಳ ಸಿಂಚನದಲ್ಲಿ ಮಿಂದು ಮಿಡಿಯುತ್ತಾ ಮದೀನಾದಲ್ಲಿ ವಿರಾಜಮಾನರಾಗಿರುವ ವಿಶ್ವಾಸೀ ಹೃದಯದ ಉಜ್ವಲ ತಾರೆಯ ಒಲವಿನಪ್ಪುಗೆಗಾಗಿ ಕಾತರದಿಂದ ಕನವರಿಸುತ್ತಾ ಕಾಯುತ್ತಿದ್ದರು.
ಅಂತರಾಳದಲ್ಲಿ ಅಡಗಿರುವ ಮದೀನಾವೆಂಬ ನಯನ ಮನೋಹರವೂ, ಮನಮೋಹಕವೂ ಆದ ಸ್ವರ್ಗದ ತುಣುಕಿನ ಭಾವನಾತ್ಮಕವಾದ ಸೆಳೆತವನ್ನು ಹತ್ತಿಕ್ಕಲಾಗದೆ ಅದೊಂದು ದಿನ ಮದೀನಾದತ್ತ ಹೊರಟೇ ಬಿಟ್ಟರು.
ಹಾಗೆ ಶೈಖುನಾ ಮದೀನಾ ತಲುಪಿದಾಗ ರೌಳಾ ಶರೀಫಿನ ಸುತ್ತಮುತ್ತ ಜನಜಂಗುಳಿ ನೆರೆದಿತ್ತು.
ರೌಳಾ ಶರೀಫಿನ ಮುಂದೆ ನೆರೆದಿದ್ದ ಆಶಿಕೀನ್ಗಳೆಲ್ಲರೂ ಸೃಷ್ಟಿಕರ್ತನ ಪ್ರೀತಿ ಪಾತ್ರರಿಗೆ ಸಲಾಮ್ ಹೇಳುವ ತವಕದಿಂದ ಮುನ್ನಡೆಯುತ್ತಿದ್ದರೆ ವೆಳಿಯಂಗೋಡು ಉಮರ್ ಖಾಝಿ (ರ) ಎಂಬ ಈ ಕಥಾನಾಯಕ ಮಾತ್ರ ತನ್ನ ಹೃನ್ಮನಗಳಲ್ಲಿ ಹುದುಗಿದ್ದ ಮದೀನಾ ಮುನವ್ವರದ ಒಲವಿನ ಅನುರಾಗದ ಅನುಬಂಧಗಳನ್ನು ಆಸ್ವಾದಿಸುತ್ತಾ ಮದೀನಾದ ಆ ಮಹಾನ್ ಚೇತನದೊಂದಿಗಿನ ಉಲ್ಲಾಸದ ಸಲ್ಲಾಪಕ್ಕೆ ಕನವರಿಸುತ್ತಾ ಆ ಜನಜಂಗುಳಿಯ ನಡುವೆ ಮೈಮರೆತು ನಿಂತಿದ್ದರು.
ಬಹಳ ಹೊತ್ತಾದರೂ ಅಲ್ಲಿಂದ ಕದಲದೆ ನಿಂತಲ್ಲೆ ನಿಂತಿರುವುದನ್ನು ಕಂಡ ಕಾವಲುಗಾರ ಅಲ್ಲಿಂದ ತೆರಳುವಂತೆ ಸೂಚಿಸಿದ. ಆದರೆ ರೌಳಾ ಶರೀಫಿನ ಅನುರಾಗದ ಅನುಬಂಧದ ಮಧುರಾನುಭೂತಿಯಲ್ಲಿ ಮೈಮರೆತಿದ್ದ ಶೈಖುನಾ ಅಲ್ಲಿಂದ ಕದಲಲಿಲ್ಲ.
ಸಹನೆಗೆಟ್ಟ ಆ ಕಾವಲುಗಾರ ಬಲ ಪ್ರಯೋಗದಿಂದ ಅವರನ್ನು ಅಲ್ಲಿಂದ ಆಚೆ ಎಳೆದೊಯ್ದನು.
ಹೂವಿನ ಮಕರಂದವ ಹೀರುವ ದುಂಬಿಯನ್ನು ಎಷ್ಟು ದೂರ ಅಟ್ಟಿದರೂ ಶರವೇಗದಿಂದ ಆ ದುಂಬಿ ಮತ್ತೆ ಹೂವಿನತ್ತ ಧಾವಿಸಿ ಬರುವಂತೆ ಶೈಖುನಾ ಪುನಃ ರೌಳಾ ಶರೀಫಿನ ಮುಂದೆ ಬಂದು ನಿಂತರು.
ಇದನ್ನು ಕಂಡು ಕುಪಿತನಾದ ಕಾವಲುಗಾರ ಬಲಪ್ರಯೋಗದಿಂದ ಮತ್ತೊಮ್ಮೆ ಅವರನ್ನು ಅಲ್ಲಿಂದ ಎಳೆದೊಯ್ದ.
ನೀಲಾಕಾಶದಲ್ಲಿ ಸ್ವಚ್ಛಂದವಾಗಿ ವಿಹರಿಸುವ ಬಾನಾಡಿಯಂತೆ ರೌಳಾ ಶರೀಫೆಂಬ ಪ್ರೇಮ ಸಾಗರದ ಒಲವಿನ ಅನುರಾಗದ ಅಲೆಗಳ ಆಲಿಂಗನದಲ್ಲಿ ಮೈಮರೆತಿದ್ದ ಶೈಖುನಾ ಕಂಬನಿ ತುಳುಕುವ ಕಂಗಳಿಂದ ಭಾವಪರವಶರಾಗಿ ಎದೆ ತುಂಬಿ ಹಾಡಿದರು...
(ಮಹಾನರು ಅಂದು ರೌಳಾ ಶರೀಫಿನ ಮುಂದೆ ಹಾಡಿದ ಬೈತಿನ ಕೆಲವು ಸಾಲುಗಳು)
*يا أكرم الكرما على اعتابكم*
*عمر الفقير المرتجي لجنابكم*
*يرجو العطاء على البكاء ببابكم*
*والدمع من عينيه سال سجيما*
*صلوا عليه وسلموا تسليما*
*ما جف دفع سال من عينين*
*لكنه يجري على الخدين*
*من حب قلبي سيد الكونين*
*حيا وميتا في التراب رميما*
*صلوا عليه وسلموا تسليما*
*"ಉನ್ನತರಲ್ಲಿ ಅತ್ಯುನ್ನತರಾದ ಮುತ್ತು ನಬಿಯವರೇ ﷺِ...*
*ತಮ್ಮ ರೌಳಾದ ಬಾಗಿಲ ಸನಿಹಕ್ಕೆ ಫಖೀರನಾದ ಉಮರ್ ತಲುಪಿದ್ದಾನೆ. ಹುಟ್ಟಿನಿಂದಲೇ ಅಂತರಾಳದಲ್ಲಿ ಅಡಗಿದ್ದ ಹಂಬಲವಾಗಿತ್ತು ಇದು ನಬಿಯವರೇ ﷺِ*
*ಅಮಾಯಕನಾದ ಈ ಉಮರ್ ತಮ್ಮ ಬಳಿ ಯಾಚಿಸುತ್ತಿರುವನು... ನನ್ನ ಕಂಗಳನ್ನೊಮ್ಮೆ ನೋಡಿರಿ.. ಹಬೀಬಿ ﷺِ ಈ ಕಂಗಳಿಂದ ವರ್ಷ ಧಾರೆಯಂತೆ ಹರಿಯುತ್ತಿರುವ ರಕ್ತದ ಹನಿಗಳಂತಹ ಕಂಬನಿಯಿದು ನಬಿಯವರೇ.. ﷺِ*
*ನಬಿಯೇ ﷺِ ಭಾವರಹಿತವಾದ ಕಂಬನಿಯ ಹನಿಗಳಿದಲ್ಲ. ತಮ್ಮೊಂದಿಗಿನ ಸ್ನೇಹ ಮತ್ತು ಪ್ರೇಮದ ಬಾಂಧವ್ಯವಿದು ನಬಿಯವರೇ ﷺِ*
*ತಾವು ವಿಶ್ರಮಿಸುತ್ತಿರುವ ರೌಳಾ ಶರೀಫನ್ನು ಕಂಡು ಕಣ್ತುಂಬಿಕೊಳ್ಳದೆ ಈ ಕಂಗಳು ಕಂಬನಿ ಹರಿಸುವುದನ್ನು ನಿಲ್ಲಿಸದು ನಬಿಯೇ ﷺِ*
ಎಂದು ಮನಸ್ಸಿನಂತರಾಳದ ಹಾವ ಭಾವಗಳಿಗೆ ಜೀವ ತುಂಬಿ ಭಾವ ಪರವಶತೆಯಿಂದ ಕಂಬನಿ ಮಿಡಿಯುತ್ತಾ ಸುಶ್ರಾವ್ಯವಾಗಿ ಹಾಡುವಾಗ ಆ ಪ್ರೇಮ ಬಾಂಧವ್ಯದ ಮಧುರ ನಿನಾದಕ್ಕೆ ಅಲ್ಲಿ ನೆರೆದಿದ್ದ ಜನಸಾಮಾನ್ಯರ ಕಣ್ಣಾಲಿಗಳೂ ತುಂಬಿ ಬಂದವು.
ಗಿಜಿಗಿಡುತ್ತಿದ್ದ ಜನಸಂದಣಿ ನಿಶ್ಶಬ್ದವಾಗಿ ನೀರವ ಮೌನದಿಂದ ತದೇಕಚಿತ್ತರಾಗಿ ಶೈಖುನಾರ ಹಾಡಿಗೆ ತಲೆದೂಗುತ್ತಿರುವಾಗ ನಿಷ್ಕಳಂಕವಾದ ಆ ಭಾವಜೀವಿಯ ಪ್ರೇಮ ಬಾಂಧವ್ಯಕ್ಕೆ ಭಾಜನರಾದ ಆ ಉಜ್ವಲ ತಾರೆ ﷺِ ರೌಳಾ ಶರೀಫಿನೊಳಗಿಂದ ಮೌನವಾಗಿ ಆಲಿಸಿ ತಲೆದೂಗಿದರು. ಮಾತ್ರವಲ್ಲ, ಅಲ್ಲೊಂದು ವಿಸ್ಮಯಕಾರಿ ಘಟನೆ ನಡೆಯಿತು.
ಏನದ್ಭುತ...!
ಕಬ್ಬಿಣದ ಸಂಕೇೂಲೆಗಳಿಂದ ಭದ್ರಪಡಿಸಲಾಗಿದ್ದ ರೌಳಾದ ಬಾಗಿಲು ತೆರೆಯಿತು. ನೆರೆದ ಜನಸ್ತೇೂಮಕ್ಕೆ ರೇೂಮಾಂಚನ.
ಮದೀನಾದ ಉಜ್ವಲ ತಾರೆಯೊಂದಿಗಿನ ಈ ಭಾವಜೀವಿಯ ಬಾಂಧವ್ಯವ ಕಂಡು ಹೆದರಿ ಕಂಪಿಸಿದ ನಿಯಮಪಾಲಕರು ಅತ್ತಿತ್ತ ಸರಿದರು.
ಎಲ್ಲರೂ ತದೇಕ ಚಿತ್ತದಿಂದ ಆನಂದಾಶ್ಚರ್ಯಚಕಿತರಾಗಿ ನೇೂಡುತ್ತಿದ್ದಂತೆ ಶೈಖುನಾ ಉಮರ್ ಖಾಝಿ (ರ) ರೌಳಾದ ಒಳಗೆ ಪ್ರವೇಶಿಸಿದರು..
ಮುತ್ತು ಹಬೀಬ್ ﷺِ ರವರ ಖಬರ್ ಶರೀಫನ್ನು ಕಂಡು ಕಣ್ತುಂಬಿಕೊಂಡು ಕಂಬನಿ ಮಿಡಿಯುತ್ತಾ ತೃಪ್ತಿಯಾಗುವ ತನಕ ಝಿಯಾರತ್ ಮಾಡಿ ಹೊರಗಿಳಿದಾಗ ಅರಬಿಗಳು ಅನರಬಿಗಳೆಲ್ಲರೂ ಶೈಖುನಾರನ್ನು ಆಲಿಂಗಿಸುತ್ತಾ ಹಾಡಿ ಹೊಗಳಿ ಕೊಂಡಾಡಿದರು.
ಅಲ್ಲಿಂದ ಬೀಳ್ಕೊಂಡ ಶೈಖುನಾ ಉಮರ್ ಖಾಝಿ (ರ) ಮತ್ತೆ ತಾಯಿನಾಡಿಗೆ ಹಿಂದಿರುಗಿದರು.
ತಾಯಿನಾಡಿಗೆ ಮರಳಿದ ನಂತರವೂ ಬ್ರಿಟೀಷರ ವಿರುದ್ಧದ ಹೇೂರಾಟವನ್ನು ಮುಂದುವರೆಸಿದರು.
ಕುತುಬುಝ್ಝಮಾನರಾದ ಮಂಬುರಂ ತಂಙಳ (ಖ.ಸಿ)ರವರ ಬಳಿ ವ್ಯಾಸಂಗ ಮಾಡುತ್ತಿದ್ದಾಗ ವೆಳಿಯಂಗೋಡು ಉಮರ್ ಖಾಝಿ (ರ) ರವರ ಸಹಪಾಠಿಯಾಗಿದ್ದ ಬೈತಾರ್ ಮುಸ್ಲಿಯಾರ್ (ಖ.ಸಿ)ರವರು ಒಂದು ಮಸೀದಿ ನಿರ್ಮಿಸಬೇಕೆಂಬ ಆಕಾಂಕ್ಷೆಯಿಂದ ಸಹೃದಯ ದಾನಿಗಳಿಂದ ಸಹಾಯ ಧನ ಸಂಗ್ರಹಿಸಿ, ಉಮರ್ ಖಾಝಿ (ರ)ರವರಿಗೆ ಆ ಹಣವನ್ನು ನೀಡಿ ಮಸೀದಿ ನಿರ್ಮಿಸುವ ಜವಾಬ್ದಾರಿಯನ್ನು ಅವರಿಗೆ ವಹಿಸಿದರು.
ದಿನಗಳು ಉರುಳುತ್ತಿದ್ದವು. ಆದರೆ ಉಮರ್ ಖಾಝಿ (ರ)ರವರು ಸುತ್ತಮುತ್ತಲ ಪ್ರದೇಶದಲ್ಲೆಲ್ಲೂ ಮಸೀದಿ ನಿರ್ಮಿಸುತ್ತಿರುವ ಬಗ್ಗೆ ಮಾಹಿತಿ ಲಭಿಸದ ಕಾರಣ ಬೈತಾರ್ ಮುಸ್ಲಿಯಾರ್ (ಖ.ಸಿ)ರವರು ಒಂದು ದಿನ ಕುತುಬುಝ್ಝಮಾನರಾದ ಮಂಬುರಂ ತಂಙಳ (ಖ.ಸಿ)ರವರ ಬಳಿ ಈ ಬಗ್ಗೆ ಹೇಳಿದಾಗ ಮಂಬುರಂ ತಂಙಳ (ಖ.ಸಿ) ರವರು ಈ ಬಗ್ಗೆ ಮರು ಮಾತನಾಡದೆ ನೀವು ಈ ಬಾರಿ ಹಜ್ ನಿರ್ವಹಿಸಲು ಹೋಗಿರಿ ಎಂದರು.
ತಂಙಳರ ಸೂಚನೆಯಂತೆ ಬೈತಾರ್ ಮುಸ್ಲಿಯಾರ್ (ಖ.ಸಿ)ರವರು ಆ ವರ್ಷ ಒಂದು ಹಜ್ ಯಾತ್ರಾ ತಂಡದೊಂದಿಗೆ ಯಾತ್ರೆ ಹೊರಟರು. ಹಜ್ ಯಾತ್ರಾ ತಂಡವು ಸೌದಿ ಅರೇಬಿಯಾದ ತ್ವಾಯಿಫ್ ಎಂಬ ಸ್ಥಳಕ್ಕೆ ತಲುಪಿದಾಗ ಬೈತಾರ್ ಮುಸ್ಲಿಯಾರ್ (ಖ.ಸಿ) ರವರು ಆಕಸ್ಮಿಕವಾಗಿ ಆ ಯಾತ್ರಾ ತಂಡದಿಂದ ಬೇರ್ಪಟ್ಟರು.
ತಂಡದಿಂದ ಬೇರ್ಪಟ್ಟ ಮುಸ್ಲಿಯಾರರು ತಂಡವನ್ನು ಸೇರಿಕೊಳ್ಳಲು ಹರಸಾಹಸ ಪಡುತ್ತಾ ಅಲೆದಾಡುತ್ತಿರುವಾಗ ದಾರಿ ಮಧ್ಯೆ ಒಂದು ಸುಂದರವಾದ ಹೊಸ ಮಸೀದಿ ನಿರ್ಮಾಣವಾಗುತ್ತಿರುವುದನ್ನು ಕಂಡರು. ಅಲ್ಲಿನ ಕೆಲಸಗಾರರೊಂದಿಗೆ ದಾರಿಯ ಕುರಿತು ವಿಚಾರಿಸೋಣವೆಂದು ಅತ್ತ ನಡೆದ ಬೈತಾರ್ ಮುಸ್ಲಿಯಾರ್ (ಖ.ಸಿ)ರವರು ಕೆಲಸಗಾರರಲ್ಲಿ ವಿಚಾರಿಸುತ್ತಿದ್ದಾಗ ಮಾತಿನ ಮಧ್ಯೆ ಆ ಕೆಲಸಗಾರರು ಈ ಮಸೀದಿಯನ್ನು ಕೇರಳದ ಉಮರ್ ಖಾಝಿ (ರ) ಎಂಬ ವ್ಯಕ್ತಿ ನಿರ್ಮಿಸುತ್ತಿರುವುದೆಂದೂ ಕೆಲಸಗಾರರಿಗೆ ಸಂಬಳ ನೀಡಲು ಪ್ರತಿವಾರವೂ ಅವರು ಇಲ್ಲಿಗೆ ಆಗಮಿಸುತ್ತಿರುವರೆಂದೂ ಹೇಳಿದರು. ಅ ಮಸೀದಿಯ ಹೆಸರು *"ಮಸ್ಜಿದುಲ್ ಅಲ್ ಹುನೂದ್"* ಎಂದಾಗಿದೆ.
ಈ ಮಾತು ಕೇಳಿದ ಬೈತಾರ್ ಮುಸ್ಲಿಯಾರ್ (ಖ.ಸಿ)ರವರು ರೋಮಾಂಚಿತರಾದರಲ್ಲದೆ ಮಂಬುರಂ ತಂಙಳ್(ಖ.ಸಿ)ರವರ ಬಳಿ ಮಸೀದಿಯ ಬಗ್ಗೆ ಹೇಳಿದಾಗ ತಂಙಳರು (ರ) ಹಜ್ ನಿರ್ವಹಿಸಲು ಸೂಚಿಸಿದ್ದರ ಮರ್ಮ ಅರಿವಾಯಿತು.
ಉಮ್ಮರ್ ಖಾಝಿಯವರ (ರ.ಅ)ರವರ ಗೌರವಾರ್ಥ ಮಕ್ಕಾದ ಒಂದು ರಸ್ತೆಗೆ ಮಹಾನರ ಹೆಸರಿಡಲಾಗಿದೆ. ಮಕ್ಕಾದಿಂದ ತ್ವಾಯಿಫ್'ಗೆ ತೆರಳುವ ಮಾರ್ಗ ಮಧ್ಯೆ ಸುಮಾರು 12 ಕಿ.ಮೀ ದೂರದಲ್ಲಿ ಮಹಾನರ ಹೆಸರಿನ "ಉಮರ್ ಖಾಝಿ ಸ್ಟ್ರೀಟ್" ಇದೆ.
ಹೀಗೆ ಅಲ್ಲಾಹನ ದೀನಿನ ಸೇವೆ ಮಾಡುತ್ತಾ ಪರಕೀಯರ ಕೈಯಿಂದ ತಾಯಿನಾಡಿನ್ನು ರಕ್ಷಿಸುವ ಸಲುವಾಗಿ ಜನರಲ್ಲಿ ಅರಿವು ಮೂಡಿಸಿ ಸಂಧಿಯಿಲ್ಲದ ಸಮರ ಸಾರಿ ಬ್ರಿಟೀಷ್ ಅಧಿಪತ್ಯಕ್ಕೆ ಸಿಂಹಸ್ವಪ್ನವಾಗಿದ್ದ ಆಧುನಿಕ ಯುಗದ ಅಸಾಮಾನ್ಯರಾದ ಸೂಫಿವರ್ಯ ಶೈಖುನಾ ವೆಳಿಯಂಗೇೂಡು ಉಮರ್ ಖಾಝಿ (ರ)ರವರು ಹಿಜರಿ 1273 ರಮಳಾನ್ 21ರ ತರಾವೀಹ್ ನಮಾಜಿನಲ್ಲಿ 10ನೇ ರಕ್ಕಾತಾದಾಗ ತಲೆ ಸುತ್ತಿ ಬಿದ್ದರು. ಅನಂತರ ರೇೂಗ ಪೀಡಿತರಾದ ಮಹಾನರು ಮೂರು ತಿಂಗಳ ನಂತರ ದುಲ್'ಹಜ್ಜ್ 23ರಂದು ರಾತ್ರಿ ವಫಾತಾದರು. ಇನ್ನಾಲಿಲ್ಲಾಹ್...
ಪೊನ್ನಾನಿ- ಚಾವಕ್ಕಾಡ್ ಮಾರ್ಗದಲ್ಲಿ 8 ಕಿಮೀ ದೂರ ಎಡಪ್ಪಾಲ್ ಸಮೀಪದ ವೆಳಿಯಂಗೇೂಡು ಎಂಬಲ್ಲಿ ಮಹಾನರ ಮಖ್ಬರವಿದೆ.
ಉಮರ್ ಖಾಝಿ (ರ) ರವರ ಆತ್ಮೀಯ ಗೆಳೆಯರಾದ ಝೈನುದ್ದೀನ್ ಮರಕಾರ್ (ಖ:ಸಿ), ರವರ ಮಖ್ಬರವೂ ಉಮರ್ ಖಾಝಿ (ರ)ರವರ ಮಖಾಮಿನ ಹೊರಗಡೆ ಇದೆ.
ನಿಷ್ಕಳಂಕ ಹೃದಯದಿಂದ ಅಲ್ಲಾಹನ ಹಬೀಬಾದ ಮುತ್ತು ನಬಿ ﷺِರನ್ನು ಪ್ರೀತಿಸಿ ಅಲ್ಲಾಹನ ಸಂಪ್ರೀತಿಗೆ ಪಾತ್ರರಾಗಿದ್ದಷ್ಟೇ ಅಲ್ಲದೆ ಆ ಉಜ್ವಲ ತಾರೆಯೇ ತಮ್ಮ ಮುಅಜಿಝಾತ್ನಿಂದ ರೌಲಾ ಶರೀಫಿನ ಬಾಗಿಲು ತೆರೆದು ಬರಮಾಡಿಕೊಳ್ಳುವಂತಹ ಸಾರ್ಥಕವಾದ ಜೀವನ ನಡೆಸಿದ ಶೈಖುನಾ ಉಮರ್ ಖಾಝಿ (ರ) ರವರ ಬರ್ಕತ್ನಿಂದ ಸರ್ವಶಕ್ತನಾದ ಅಲ್ಲಾಹನು ಕೊರೇೂನ ಎಂಬ ಮಹಾಮಾರಿ ಸೇೂಂಕಿನಿಂದ ಸರ್ವರಿಗೂ ಸಂರಕ್ಷಣೆ ನೀಡುವುದರ ಜೊತೆಗೆ ನಮ್ಮೆಲ್ಲರನ್ನೂ ವಿಜಯಗಳ ಸಾಲಿನಲ್ಲಿ ಸೇರಿಸಲಿ ಆಮೀನ್.
*ಮುಗಿಯಿತು.*
Date: 24:04:2020
No comments:
Post a Comment