ಜಗತ್ತು ಕಂಡ ಶ್ರೇಷ್ಟ ಆಡಳಿತಗಾರ, ಇಸ್ಲಾಮಿನ ಎರಡನೇ ಖಲೀಫ ಉಮರ್ ರ.ಅ ರವರ ಒಂದು ಘಟನೆ ಸಾಂದರ್ಭಿಕವಾಗಿ ನೆನಪಾಯಿತು.
ಉಮರ್(ರ.ಅ)ರು ನಿತ್ಯದಂತೆ ರಾತ್ರಿ ಸವಾರಿಗೆ ಹೊರಟಿದ್ದರು. ಕತ್ತಲು ತುಂಬಿದ ಕಡುಮರುಭೂಮಿಯಲ್ಲಿ ಅಲ್ಲೋ ಇಲ್ಲೋ ಎಂಬಂತೆ ದೂರ ದೂರದಲ್ಲಿ ಮನೆಗಳು. ಖಲೀಫರು ತಮ್ಮ ಕುದುರೆಯ ಮೇಲೆ ಚಲಿಸುತ್ತಾ ಒಂದೊಂದು ಮನೆಯನ್ನು ದಾಟತೊಡಗಿದರು. ಹೀಗಿರಲು ದೂರದಿಂದ ಮಗುವಿನ ಅಳುವ ಶಬ್ಧ ಕೇಳತೊಡಗಿತ್ತು. ಶಬ್ಧ ಬಂದ ಕಡೆಗೆ ಖಲೀಫರ ಕುದುರೆ ಚಲಿಸತೊಡಗಿತ್ತು. ಒಂದೊಂದು ಮನೆ ದಾಟಿದೊಡನೆ ಅಳುವಿನ ಶಬ್ಧ ಇನ್ನಷ್ಟು ಅಧಿಕವಾಗುತ್ತಿತ್ತು. ಖಲೀಫರು ದಿಟ್ಟಿಸಿ ನೋಡಿದರು. ದೂರದ ಗುಡಿಸಲಿನ ಸಂಧಿಗಳಿಂದ ಸಣ್ಣನೆಯ ಪ್ರಕಾಶ ಕಾಣತೊಡಗಿತ್ತು.
ಹಾ ಹೌದು ಅದೇ ಮನೆಯಿಂದ ಅಳುತ್ತಿರುವ ಶಬ್ಧ ಕೇಳಿ ಬರುತ್ತಿರುವುದು. ಖಲೀಫ ಉಮರರು ಆ ಮನೆಯತ್ತ ಧಾವಿಸಿದರು. ಮನೆಯ ಕಿಟಕಿಯ ಸಂಧಿಯಿಂದ ಖಲೀಫರು ನೋಡಿದರು.
ಒಬ್ಬಳು ಮಧ್ಯವಯಸ್ಸಿನ ಮಹಿಳೆ ಒಲೆಯಲ್ಲಿಟ್ಟ ಪಾತ್ರೆಗೆ ಸೌಟು ಹಾಕಿ ಅಲ್ಲಾಡಿಸುತ್ತಿದ್ದಾಳೆ. ಹತ್ತಿರ ಕುಳಿತ ಮಕ್ಕಳು ಹಸಿವಿನಿಂದ ನರಳುತ್ತಾ ಅಳುತ್ತಿದ್ದಾರೆ. ಮಹಿಳೆಯಾದರೋ ತಡಮಾಡದಿರಿ ಈಗ ಬೇಯುತ್ತದೆ. ಮತ್ತೆ ನಿಮಗೆ ಉಣ್ಣಲಿಡುವೆನು ಅಂತ ಸಮಧಾನಿಸುತ್ತಿದ್ದಾಳೆ. ಖಲೀಫ ಅತ್ತ ಕಡೆ ದೃಷ್ಟಿ ಹಾಯಿಸುತ್ತಾ ನಿಂತರು. ಮಕ್ಕಳು ಅಳುತ್ತಿದ್ದರೂ ಮಹಿಳೆ ತನ್ನದೇ ಕೆಲಸದಲ್ಲಿ ಮಗ್ನಳಾಗಿದ್ದಾಳೆ. ಇದನ್ನೇ ನೋಡುತ್ತಿದ್ದ ಖಲೀಫ ಇಷ್ಟು ಸಮಯವಾದರೂ ಬೇಯದ ವಸ್ತು ಯಾವುದೆಂದು,
ಮಹಿಳೆ ಯಾಕಾಗಿ ಇಷ್ಟು ಸಮಯ ತೆಗೆಯುತ್ತಿರುವಳೆಂದು ಸಮೀಪ ಬಂದು ಬಾಗಿಲು ತಟ್ಟಿ ಒಳಗೋದರು.
ಮುರುಕಲು ಗುಡಿಸಲಿನ ಒಂದು ಮೂಲೆಯಲ್ಲಿ ಮಕ್ಕಳು ಯಾತನೆಯಿಂದ ಅಳುತ್ತಿದ್ದಾರೆ. ಖಲೀಫರು ಮೆದುವಾದ ಧ್ವನಿಯಲ್ಲಿ ' ಮಕ್ಕಳು ಯಾಕೆ ಅಳುತ್ತಿರುವುದು?!!'
ಒಳಗಿಂದ ಮಹಿಳೆ 'ಹಸಿವಿನಿಂದ' ಎಂದು ಕ್ಷೀಣ ಧ್ವನಿಯಲ್ಲಿ ನುಡಿದಳು...
"ಒಲೆಯಲ್ಲಿರುವ ಆಹಾರ ಇನ್ನೂ ಕೂಡ ಬೇಯಲಿಲ್ಲವೇ?!
ಆ ಆಹಾರವನ್ನು ಮಕ್ಕಳಿಗೆ ಉಣಿಸಬಹುದಲ್ಲವೇ?!" ಖಲೀಫರು ಮರುಪ್ರಶ್ನಿಸಿದರು...
" ಅದರಲ್ಲಿ ಬರಿ ನೀರು ಹೊರತು ಬೇರೇನು ಇಲ್ಲಾ...
ಆಹಾರ ಕಾಣದೆ ತುಂಬಾ ದಿವಸಗಳಾದವು. ಮಕ್ಕಳು ಈ ಒಲೆಯಲ್ಲಿ ಆಹಾರವಿದೆಯೆಂದು ಅಳುತ್ತಾ ಕಾಯುತ್ತಾರೆ. ಮಕ್ಕಳಲ್ಲವೇ ಚೂರು ಸಮಯದ ನಂತರ ನಿದ್ದೆಗೆ ಜಾರುತ್ತಾರೆ!! ನಂತರ ಈ ಒಲೆಯಲ್ಲಿನ ನೀರನ್ನು ಕುಡಿದು ನಾನೂ ಕೂಡ ಮಲಗುವೆನು..."
ಖಲೀಫರು ಒಂದು ಬಾರಿ ತುಂಬಿದ ಕಣ್ಣುಗಳಿಂದ ಹರಿದುಬರುತ್ತಿರುವ ಕಣ್ಣೀರನ್ನು ಅದುಮಿಟ್ಟು ಮೂಕರಾದರು...
ನಂತರ ಮಾತು ಮುಂದುವರಿಸುತ್ತಾ ಈ "ವಿಷಯವನ್ನು ತಾವು ಖಲೀಫರ ಬಳಿ ತಿಳಿಸಲಿಲ್ಲವೇ?!!"
"ನಾವು ಬಡವರು! ನಮಗೆಲ್ಲಿ ಖಲೀಫರ ಬಳಿ ತೆರಳಲು ಅವಕಾಶ?!
ಖಲೀಫರೆ ಬಂದು ನಮ್ಮ ಕಷ್ಟವನ್ನು ನೆರವೇರಿಸಬೇಕಲ್ಲವೇ?!"
ಇದನ್ನು ಕೇಳುತ್ತಿದ್ದಂತೆ ಖಲೀಫರು ಎದೆಯೊಡೆದಂತಹ ನೋವಿನಿಂದ ತಟ್ಟನೆ ತನ್ನ ಕುದುರೆಯೇರಿ ಹೊರಟರು.
ಮಹಿಳೆಯು ವ್ಯಕ್ತಿಯ ಕುದುರೆ ಕಣ್ಣಂಚಿನಿಂದ ಮರೆಯಾಗುತ್ತಿದಂತೆಯೇ ಆ ವ್ಯಕ್ತಿ ಯಾರಾಗಿರಬಹುದೆಂದು ಯೋಚಿಸುತ್ತಾ ಬಾಗಿಲನ್ನು ಭದ್ರಪಡಿಸಿದರು.
ಮಾರನೆ ದಿನ ಮುಂಜಾನೆ ಮಹಿಳೆ ಬಾಗಿಲು ತೆರೆಯುತ್ತಿದಂತೆಯೇ ದೂರದಿಂದ ವ್ಯಕ್ತಿಯು ಶರವೇಗದಿಂದ ಧಾವಿಸುತ್ತಿರುವಂತೆ ಕಂಡಿತ್ತು. ತನ್ನ ಮನೆಯತ್ತ ಧಾವಿಸುತ್ತಿರುವ ಕುದುರೆಗಾರನನ್ನು ತದೇಕಚಿತ್ತದಿಂದ ನೋಡಿದ ಮಹಿಳೆ ಗುರುತಿಸುತ್ತಾಳೆ. ಹಿಂದಿನ ದಿನ ರಾತ್ರಿ ತನ್ನ ಬಳಿ ವಿಚಾರಿಸಿ ಹೋದ ಅದೇ ವ್ಯಕ್ತಿ ಕುದುರೆಯ ಮೇಲಿಂದ ದೊಡ್ಡ ಗಾತ್ರದ ಮೂಟೆಯನ್ನು ಆ ಮಹಿಳೆಯ ಮನೆಮುಂದೆ ಇಳಿಸುತ್ತಾರೆ.
ನಂತರ ಖಲೀಫ "ಮೂಟೆಯಲ್ಲಿ ಧಾನ್ಯ ಮತ್ತು ಮಾಂಸವಿದೆ. ಮುಂದೆ ಮಕ್ಕಳು ಮತ್ತು ನೀವು ಹಸಿವಿನಿಂದರಬೇಡಿ" ಎಂದು ಹೇಳುತ್ತ ಕುದುರೆಯೇರಿ ಹೊರಡಲು ಅನುವಾದರು.
ತುಂಬು ಸಂತೋಷದಿಂದ ಮಹಿಳೆಯು ಆ ವ್ಯಕ್ತಿಯ ಕರೆಯುತ್ತಾ "ನಿಮ್ಮಂತವರು ಖಲೀಫರಾಗಬೇಕು. ಆದರೇನೆ ನಮ್ಮ ಹಸಿವು ನೀಗಬಹುದು"
ಎಂದಾಗ...
ಹೊರಟು ನಿಂತ ಖಲೀಫ ತಿರುಗಿ " ಉಮ್ಮಾ ..ಖಲೀಫಾ ಉಮರ್ ಎಂದರೆ ನಾನೇ! ನನ್ನಿಂದಾದ ತಪ್ಪಿಗೆ ಕ್ಷಮೆಯಾಚಿಸುವೆನು." ಎನ್ನುತ್ತಾ ಕುದುರೆಯೇರಿ ಹೊರಟರು...
ಮಹಿಳೆಯ ಕಣ್ಣುಗಳು ತುಂಬಿದವು. ಖಲೀಫರ ಕುದುರೆ ಕಣ್ಣಿಗೆ ದೂರವಾಗುತ್ತಿದ್ದಂತೆಯೆ ಸಂತೋಷದಿಂದ ಮಹಿಳೆಯ ಆಹಾರದ ಮೂಟೆಗಳನ್ನು ಎತ್ತಿ ಒಳಗೊಯ್ದರು...
************
ಒಂದು ಹೊತ್ತಿನ ಆಹಾರ ಕದ್ದ ಪರಿಣಾಮದಿಂದ ತನ್ನ ಜೀವವನ್ನೆ ಅರ್ಪಿಸಬೇಕಾದ ಮಧು ಎಂಬ ವ್ಯಕ್ತಿಯ ಸಾವಿಗೆ ಅವನನ್ನು ಕೊಂದವರಿಗಿಂತಲೂ, ಮುಖ್ಯ ಕಾರಣ ಅಲ್ಲಿನ ಆಡಳಿತ ವ್ಯವಸ್ಥೆಯಾಗಿದೆ. ಒಂದೊಮ್ಮೆ ಆತ ಹಸಿಯದಿದ್ದರೆ ಆತ ಕಳ್ಳತನಕ್ಕೂ ಇಳಿಯುತ್ತಿರಲಿಲ್ಲಾ. ಈ ಘಟನೆಯಿಂದಾದರೂ ಪ್ರತಿಯೊಂದು ಆಡಳಿತ ಸರಕಾರಗಳು ಕಣ್ಣುತೆರೆಯಬೇಕಾಗಿದೆ.
ಮಾರ್ಬಲ್ ಹಾಸದ ಮಸೀದಿಯ ನಮಾಝನ್ನು ಅಲ್ಲಾಹು ಸ್ವೀಕರಿಸುವನು...
ಮಂದಿರದ ದೇವರು ನನಗೆ ಚಿನ್ನದಿಂದ ತುಲಾಭಾರ ಮಾಡಿ ಎಂದು ಯಾವತ್ತೂ ಕೇಳಿಕೊಂಡಿಲ್ಲಾ...
ಚಿನ್ನದ ಶಿಲುಭೆಯ ವಿನಃ ನನ್ನ ಸಾನಿಧ್ಯ ಚರ್ಚಿನಲ್ಲಿ ಇರದೆಂದು ಕ್ರಿಸ್ತು ಕೂಡ ಎಲ್ಲೂ ಹೇಳಿರಲ್ಲಾ...
ಆದರೆ ಹಸಿದವನಿಗೆ ಆಹಾರ ನೀಡು ಎಂದು ಪ್ರತಿಯೊಂದು ಧರ್ಮ ಕೂಡ ಹೇಳುತ್ತಾ ಬಂದಿದೆ. ನಮ್ಮ ನೆರೆಯವನು ಹಸಿದು ಕಳ್ಳತನಕ್ಕೆ ಇಳಿದರೆ ಅದಕ್ಕೆ ನಾವು ಕೂಡ ಕಾರಣ ಎಂಬುವುದು ಪ್ರತಿಯೊಬ್ಬ ನೆನಪಿನಲ್ಲಿ ಇಟ್ಟುಕೊಂಡರೆ ಮುಂದೆ ಇಂತಹ ಅನಾಹುತಗಳು ನಡೆಯದು.
_ ತಾಜ್
No comments:
Post a Comment