*ರೋಗಿಯನ್ನು ಸಂದರ್ಶಿಸಲು ಹೊರಟಿದ್ದೀರಾ ...?*
*ಒಂದ್ನಿಮಿಷ..!*
ರೋಗಿಯಾದ ವ್ಯಕ್ತಿಯನ್ನು ಸಂದರ್ಶಿಸುವುದು ಸುನ್ನತ್ತಾಗಿದೆ.ಮಾತ್ರವಲ್ಲ , ಅದನ್ನು ಸುನ್ನತ್ತಾಗಿ ಆಜ್ಞಾಪಿಸಿದ ಇಸ್ಲಾಮ್ ಧರ್ಮವು ರೋಗಿಯೊಂದಿಗೆ ಪಾಲಿಸಬೇಕಾದ ವರ್ತನೆಯು ಯಾವ ರೀತಿಯಲ್ಲಾಗಿರಬೇಕು ಎನ್ನುವುದನ್ನು ಸ್ಪಷ್ಟವಾಗಿ ಕಲಿಸಿಕೊಟ್ಟಿದೆ. ರೋಗಿಯಾದ ವ್ಯಕ್ತಿಯೊಬ್ಬರನ್ನು ಸಂದರ್ಶಿಸುವಾಗ ಅವರಿಗೆ ಭರವಸೆ ಮೂಡಿಸುವಂತಹ ಮಾತುಗಳನ್ನು ನೀವು ಆಡಿರಿ.
ರೋಗಿಯ ಹತ್ತಿರ ( ಅವರಿಗಿಷ್ಟವಿಲ್ಲದಿದ್ದರೆ) ಹೆಚ್ಚು ಹೊತ್ತು ಕೂತುಕೊಳ್ಳಬಾರದು. ರೋಗಿಯ ರೋಗವು ಶಮನವಾಗುವ ನಿರೀಕ್ಷೆಯಿದ್ದಲ್ಲಿ ರೋಗ ಶಮನಕ್ಕಾಗಿ ನೀವು ದುವಾ ಮಾಡಿರಿ.ರೋಗಿಯೊಂದಿಗೆ ದುಆಃ ಮಾಡಲು ವಸಿಯ್ಯತ್ ಮಾದಿರಿ. ರೋಗವುಂಟಾದ ಕಾರಣದಿಂದ ಅವರಿಗೆ ಲಭಿಸುವ ಪ್ರತಿಫಲದ ಬಗ್ಗೆಯೂ , ಆ ರೋಗದ ಕಾರಣಗಳಿಂದ ನೀವು ದುಃಖಿತರಾಗದಿರಿ ಎಂದು ಹೇಳುತ್ತಾ ತೌಬಾ ಮತ್ತು ದುವಾ ನಡೆಸುವಂತೆ ಅವರಲ್ಲಿ ವಿನಂತಿಸಬೇಕು.
ರೋಗಿಯ ಕಾರಣದಿಂದ ಕುಟುಂಬಸ್ಥರಿಗೆ ಯಾವುದೇ ನೋವು ಉಂಟಾಗದಂತೆ ಕುಟುಂಬಸ್ಥರನ್ನು ಸಮಾಧಾನ ಪಡಿಸುವುದೂ ಸಹ ಸುನ್ನತ್ತಾಗಿರುತ್ತದೆ ಅಂತ ಕಲಿಸಿದ ಧರ್ಮದ ಅನುಯಾಯಿಗಳಾದ ನಾವು ರೋಗಿಯ ಮುಂದೆ ತೋರುವಂತಹ ವರ್ತನೆಗಳು ಅದ್ಯಾವ ಮಟ್ಟಕ್ಕೆ ಇಳಿದು ಬಿಟ್ಟಿದೆ ಅನ್ನುವುದರ ಕುರಿತು ನಾವು ಚಿಂತಿಸಬೇಕಾಗಿದೆ.
ಮನುಷ್ಯನಾಗಿ ಹುಟ್ಟಿದ ಪ್ರತಿಯೊಬ್ಬನಿಗೂ ಮರಣ ಅನ್ನುವುದು ನಿಶ್ಚಯ . ಅದು ಯಾವ ಸಮಯದಲ್ಲಿ ,ಯಾವ ರೂಪದಲ್ಲಿ ಬಂದೆರಗುತ್ತದೆ ಅಂತ ಯಾರಿಗೂ ಹೇಳಲು ಸಾಧ್ಯವಿಲ್ಲ.
ಐಹಿಕ ಜೀವನದ ಲಾಲಸೆಯಲ್ಲಿ ಮೆರೆದಾಡುವ ಮನುಷ್ಯನಿಗಿಂದು ತನ್ನ ಶರೀರವು ಮರಣದ ರುಚಿಯನ್ನು ಆಸ್ವದಿಸಲು ಇದೆ ಅನ್ನುವಂತಹ ಸತ್ಯವನ್ನು ಮರೆತವನಂತೆ ವರ್ತಿಸುತ್ತಿದ್ದಾನೆ.
ಯಾವುದೇ ಒಬ್ಬ ರೋಗಿಯನ್ನು ಸಂದರ್ಶಿಸುವಾಗಲೂ ಆ ರೋಗಿಯನ್ನು ಸಂದರ್ಶಿಸಲು ಹೋದಂತಹ ವ್ಯಕ್ತಿಯ ಮಾತು ಕೇಳಿ ಇನ್ನಷ್ಟು ಖಿನ್ನತೆಗೊಳಗಾಗುವಂತಾಗಬಾರದು. ಆದರೆ ಇಂದು ನಾವು ಗೊತ್ತಿದ್ದೂ ಮಾಡುವ ತಪ್ಪುಗಳು ಸಹ ಇದುವೇ ಆಗಿರುತ್ತದೆ.
ರೋಗ ಪೀಡಿತರಾಗಿ ಮಲಗಿರುವ ವ್ಯಕ್ತಿಯ ಮುಂದೆ ಆ ವ್ಯಕ್ತಿಯ ರೋಗವನ್ನು ಅವರಿಗೆ ಅರ್ಥವಾಗುವಂತೆ ವಿವರಿಸಿಕೊಟ್ಟು , ಆ ರೋಗದಿಂದ ಇಂತಹ ಪರಿಣಾಮಗಳು ಸಂಭವಿಸುತ್ತದೆ . ಇನ್ನೂ ನಿಮ್ಮ ಪ್ರಾಯ ಸಣ್ಣದು ಅದಲ್ಲದೆ ನಿಮಗಿಷ್ಟು ಮಕ್ಕಳಿದ್ದಾರೆ ಅವರಿಗೆ ನೀವು ಈ ರೂಪದಲ್ಲಾದರೆ ಯಾರಿದ್ದಾರೆ ಅಂತ ಕೇಳಿದರೆ ಆ ಮನುಷ್ಯನು ಕಾಯಿಲೆಗಿಂತ ಅಧಿಕವಾಗಿ ಭಯ ಭೀತರಾಗುವುದು ಈ ವ್ಯಕ್ತಿಯ ಮಾತಿಗಾಗಿರುತ್ತದೆ.
ಮಾನಸಿಕವಾಗಿ ಖಿನ್ನತೆಗೊಳಗಾಗಲು ಆ ವ್ಯಕ್ತಿಗೆ ಇನ್ನು ರೋಗದ ಅವಶ್ಯಕತೆ ಖಂಡಿತವಾಗಿಯೂ ಇರಲ್ಲ.
ಆ ಕಾರಣದಿಂದಾಗಿ ಇಸ್ಲಾಂ ಧರ್ಮವು ರೋಗಿಯ ಮುಂದೆ ಹೆಚ್ಚು ಕೂತುಕೊಳ್ಳಬಾರದು ಅಂತ ತಾಕೀತು ಮಾಡಿದ್ದು.
ಹಸನುಲ್ ಬಸ್ವರಿ ರ.ಅ ರವರು ರೋಗಾವಸ್ಥೆಯಲ್ಲಿ ಕಳೆಯುತ್ತಿರುವಂತಹ ಸಂದರ್ಭದಲ್ಲಿ ಅವರನ್ನು ಸಂದರ್ಶಿಸಲು ಅವರ ನಿಕಟವರ್ತಿಗಳು ಅವರನ್ನು ಸಂದರ್ಶಿಸಲು ಹೋಗುತ್ತಾರೆ. ಸಂದರ್ಶಕರು ತುಂಬಾ ಹೊತ್ತು ಅಲ್ಲಿಂದ ಕದಲದೆ ತಮ್ಮದೇ ಮಾತುಕತೆಯಲ್ಲಿ ನಿರತರಾದಾಗ ಹಸನುಲ್ ಬಸ್ವರಿ ರ.ಅ ರವರಿಗೆ ಅವರಿರುವ ಕಾರಣದಿಂದ ಅಲ್ಲಿಂದ ಎಲ್ಲಿಗೂ ಹೋಗಲು ಸಾಧಿಸಲಿಲ್ಲ. ಕೊನೆಗೆ ಬಂದವರು ಅಲ್ಲಿಂದ ಹೊರಟು ಹೋಗುವಾಗ ದುವಾ ಮಾಡಲು ವಸಿಯ್ಯತ್ ಮಾಡಿದಾಗ ಹಸನುಲ್ ಬಸ್ವರಿ ರ.ಅ ರವರು ಸರ್ವಶಕ್ತನಾದ ರಬ್ಬೇ.. ನೀನು ಇವರಿಗೆ ರೋಗಿಯನ್ನು ಸಂದರ್ಶಿಸಲು ಹೋದಾಗ ಪಾಲಿಸಬೇಕಾದ ಮರ್ಯಾದೆಯನ್ನು ಕಲಿಸಿಕೊಡು ಅಂತ ಪ್ರಾರ್ಥಿಸಿದರು ಅಂತ ಚರಿತ್ರೆ ಗ್ರಂಥಗಳಲ್ಲಿ ಕಾಣಲು ನಮಗೆ ಸಾಧ್ಯವಿದೆ.
ರೋಗಿಯ ಮುಂದೆ ವಿವೇಚನೆಯಿಲ್ಲದವರಂತೆ ವರ್ತಿಸುವುದರ ಗಂಭೀರತೆಯನ್ನು ನಮಗೆ ಇದರಿಂದ ಅರ್ಥೈಸಲು ಸಾಧ್ಯವಿದೆ.
ಇನ್ನು ಕೆಲವು ಮಂದಿ ರೋಗಿಯನ್ನು ಸಂದರ್ಶಿಸಿದಾಗ ಈ ರೋಗವು ಒಬ್ಬರಿಂದಾಗಿ ಮನೆ ಮಂದಿಗೆಲ್ಲಾ ಹರಡುತ್ತದೆ ಅನ್ನುವ ಸುಳ್ಳನ್ನು ಹಬ್ಬಿಸಿ ಮನೆ ಮಂದಿಯನ್ನೆಲ್ಲಾ ಭಯ ಪಡಿಸುವುದು ಹಲವು ಕಡೆಗಳಲ್ಲಿ ಕಾಣಬಹುದು. ಒಂದು ಮನೆಯಲ್ಲಿರುವ ಒಬ್ಬ ರೋಗಿಯಿಂದಾಗಿ ಅವರ ಮನೆಯಲ್ಲಿರುವವರಿಗೆಲ್ಲಾ ಆ ರೋಗ ಹರಡುವುದಿಲ್ಲವೆಂದು ಪ್ರವಾದಿ ಸ. ಅ ರವರು ಹದೀಸ್ ಗಳಲ್ಲಿ ವ್ಯಕ್ತಪಡಿಸಿದ್ದಾರೆ. ಹೀಗಿರುವಾಗ ಯಾರೋ ಬಂದು ಏನೋ ಹೇಳಿದರು ಅಂತೇಳಿ ಭಯ ಪಡಬೇಕಾಗಿಲ್ಲ.
ರೋಗಿಯಾದ ವ್ಯಕ್ತಿಯೊಬ್ಬನ ಅವಸ್ಥೆಯು ಎದೆ ಹಾಲು ಕುಡಿಯುವ ಮಗುವಿನ ರೀತಿಯಲ್ಲಾಗಿರುತ್ತದೆ. ಒಬ್ಬ ರೋಗಿಯಾದವನ ಮಾನಸಿಕ ಸ್ಥಿತಿಗತಿಗಳನ್ನು ಅರ್ಥೈಸಬೇಕಾದರೆ ರೋಗಿಯೇ ಆಗಬೇಕೆಂದಿಲ್ಲ. ಒಬ್ಬರ ನೋವನ್ನು ಅರ್ಥೈಸುವ ನಿಷ್ಕಳಂಕ ಮನಸ್ಸಿದ್ದರೆ ಸಾಕು.
ನೀವು ಯಾವುದಾದರೂ ರೋಗಿಯನ್ನು ಸಂದರ್ಶಿಸಲು ಹೋಗುವವರೇ ಆಗಿದ್ದಲ್ಲಿ , ಆ ರೋಗಿಗೆ ನಿಮಗೆ ಸಹಾಯ ಮಾಡಲು ಸಾಧ್ಯವಾಗದಿದ್ದರೂ , ರೋಗಿಯೊಡನೆ ಪಾಲಿಸಬೇಕಾದ ಮರ್ಯಾದೆಗಳನ್ನು ಪಾಲಿಸಿ ,ಮನುಷ್ಯತ್ವವನ್ನು ಉಳಿಸಿಕೊಂಡು ಜೀವಿಸುವಂತವರಾಗಿ.
*ಸ್ನೇಹಜೀವಿ ಅಡ್ಕ*
No comments:
Post a Comment