*ಹುತಾತ್ಮ ಟಿಪ್ಪು ಸುಲ್ತಾನ್*
*ಸ್ವತಂತ್ರ್ಯ ಕರ್ನಾಟಕದ ಹರಿಕಾರ*
ಪ್ರಿಯರೇ ಪರ-ವಿರೋಧಗಳಿಂದ ಹೊರತಾದ ಟಿಪ್ಪು ಸುಲ್ತಾನ್ ಕುರಿತ ವಾಸ್ತವ ಸಂಗತಿಗಳನ್ನು ತಿಳಿಸುವ ಬರೆಹ ಇದಾಗಿದೆ. ಟಿಪ್ಪುಸುಲ್ತಾನ್ ಜಯಂತಿಯನ್ನು ಮತೀಯ ನೆಲೆಯಲ್ಲಿ ವಿರೋಧಿಸಲಾಗುತ್ತಿರುವ ಸಂದರ್ಭದಲ್ಲಿ ಸತ್ಯವನ್ನು ಮುನ್ನೆಲೆಗೆ ತರಲು ಬಯಸುವ
ಚರ್ಚೆಯಲ್ಲಿ ನೆರವಾಗುವ ಉದ್ದೇಶದಿಂದ ಈ ಬರೆಹವನ್ನು ಕಳುಹಿಸುತ್ತಿದ್ದೇವೆ.
ಸಹಕಾರ: ಸಮಾಜವಿಜ್ಞಾನ ಅಧ್ಯಯನ ಸಂಸ್ಥೆ
*✍🏻...ಲಾಸ್ಟ್ ಬೆಂಚ್ ಜಲೀ*
*ಸ್ವಾತಂತ್ರ್ಯ ಸಮರದ ಮಹಾ ದಂಡನಾಯಕ*
ಭಾರತದಿಂದ ಬ್ರಿಟಿಷರನ್ನು ಒದ್ದೋಡಿಸಲು ಪಣತೊಟ್ಟು ನಿಂತಿದ್ದ ದೇಶಪ್ರೇಮಿ ಹೈದರಾಲಿ ತೀವ್ರ ಅನಾರೋಗ್ಯದಿಂದ ತನ್ನ ಬದುಕಿನ ಕೊನೆಯ ಕ್ಷಣಗಳನ್ನು ಎಣಿಸುತ್ತಿದ್ದ. ಆ ಹೊತ್ತು ಆತನ ಪ್ರೀತಿಯ ಮಗ ಟಿಪ್ಪು ದೂರದ ಮಲಬಾರಿನಲ್ಲಿ ಬ್ರಿಟಿಷ್ ಕರ್ನಲ್ ಹಂಬರ್ಸ್ಟನ್ನೊಡನೆ ಕಾಳಗದಲ್ಲಿ ನಿರತನಾಗಿದ್ದ. ತನ್ನ ದೇಹದಿಂದ ಪ್ರಾಣ ಹೊರಡುವುದು ಖಚಿತವಾಗುತ್ತಲೇ ಆ ವೀರಯೋಧ ಹೈದರ್, ತಾನು ಅರ್ಧಕ್ಕೆ ಬಿಟ್ಟು ಹೊರಡುತ್ತಿರುವ ಕಾರ್ಯ ಪೂರ್ಣಗೊಳಿಸುವ ತನ್ನ ಅಂತಿಮ ಇಚ್ಛಾಪತ್ರವನ್ನು ತನ್ನ ವೀರಪುತ್ರನಿಗೆ ಬರೆದ. ಆ ಇಚ್ಛೆ ಸ್ವಾರ್ಥ ಸುಖದ ಕುರಿತಾಗಿರಲಿಲ್ಲ, ಬದಲಾಗಿ ನಾಡಿನ ಸ್ವಾತಂತ್ರ್ಯದ ಕುರಿತಾಗಿತ್ತು. ಬ್ರಿಟಿಷರ ವಿರುದ್ದ ಹೋರಾಡುತ್ತಾ ರಣರಂಗದಲ್ಲಿ ಪ್ರಾಣ ಬಿಡುತ್ತಿದ್ದ ಆ ವೀರಯೋಧ, ತನ್ನ ವೀರಪುತ್ರನೂ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಹೋರಾಟ ಮುಂದುವರೆಸುವಂತೆ ವೀರ ಸಂದೇಶವನ್ನೇ ನೀಡಿ, ಡಿಸೆಂಬರ್ 7, 1782ರಂದು ಹುತಾತ್ಮನಾದ.
ಯುದ್ಧಭೂಮಿಯಿಂದ ಟಿಪ್ಪು ಮರಳಿದಾಗ ತನ್ನ ಪ್ರೀತಿಯ ತಂದೆಯ ಪ್ರಾಣ ಹೊರಟು ಹೋಗಿತ್ತು. ಅಂತೆಯೇ ತಂದೆ ತನಗಾಗಿ ಬರೆದಿಟ್ಟ ಪತ್ರ ತನ್ನ ಕೈ ಸೇರಿತ್ತು. ಅದು ಹೀಗಿತ್ತು;
“ಮಗನೇ, ಈ ಸಾಮ್ರಾಜ್ಯವನ್ನು ನಿನಗೊಪ್ಪಿಸುತ್ತಿದ್ದೇನೆ. ಇದನ್ನು ನಾನು ನನ್ನ ಪೂರ್ವಜರಿಂದ ಪಡೆದಿದ್ದಲ್ಲ. ಈ ಸಾಮ್ರಾಜ್ಯದ ಆಂತರಿಕ ವ್ಯವಹಾರಗಳ ಬಗ್ಗೆ ನೀನು ಹೆಚ್ಚಿನ ಆತಂಕ ಪಡಬೇಕಿಲ್ಲ. ಆದರೆ ನೀನು ದೂರದೃಷ್ಟಿ ಹೊಂದಿರಬೇಕು. ಔರಂಗಜೇಬನ ಪತನದ ನಂತರ ಏಷಿಯಾದ ಸಾಮ್ರಾಜ್ಯಗಳಲ್ಲಿ ಭಾರತದ ಸ್ಥಾನ ಕುಸಿದಿದೆ. ಈ ನಮ್ಮ ಪ್ರಿಯ ಭೂಮಿ ಹಲವು ಪ್ರಾಂತ್ಯಗಳಾಗಿ ವಿಭಜನೆಹೊಂದಿ ಅವು ಪರಸ್ಪರ ಕಚ್ಚಾಡುತ್ತಿವೆ. ಹಲವು ಗುಂಪುಗಳಾಗಿ ಒಡೆದು ಹೋಗಿರುವ ಜನ ದೇಶಪ್ರೇಮವನ್ನು ಕಳೆದುಕೊಂಡಿದ್ದಾರೆ. ಹಿಂದೂಗಳು ಶಾಂತಿ ಸಂಧಾನದ ಜಪ ಮಾಡುತ್ತಾ ಬ್ರಿಟಿಷರಿಗೆ ಬಲಿಯಾಗಿ ಈ ದೇಶವನ್ನು ಕಾಪಾಡುವ ಶಕ್ತಿ ಕಳೆದುಕೊಂಡಿದ್ದಾರೆ. ಮುಸ್ಲಿಮರು ಹಿಂದೂಗಳಿಗಿಂತ ಹೆಚ್ಚು ಐಕ್ಯತೆ ಹೊಂದಿದ್ದು ಈ ಹಿಂದೂಸ್ತಾನವನ್ನು ಉಳಿಸುವ ಜವಾಬ್ದಾರಿ ಅವರ ಮೇಲಿದೆ.
ಮಗನೇ, ಈ ದೇಶವನ್ನುಳಿಸಲು ಈ ಎಲ್ಲಾ ಶಕ್ತಿಗಳನ್ನು ಒಗ್ಗೂಡಿಸು. ಈ ನಿನ್ನ ಯೋಜನೆಯಲ್ಲಿ ನಿನಗೆ ದೊಡ್ಡ ಆತಂಕ ಉಂಟುಮಾಡುವವರು ಯುರೋಪಿಯನ್ನರೇ ಆಗಿದ್ದಾರೆ. ಭಾರತದ ಬಗ್ಗೆ ಅವರಿಗಿರುವ ಅಸೂಯೆಯನ್ನು ನೀನು ಸೋಲಿಸಬೇಕು. ಇಂದು ಭಾರತದಲ್ಲಿ ಇಂಗ್ಲಿಷರು ಪ್ರಬಲವಾಗಿದ್ದಾರೆ. ಅವರನ್ನು ಸತತ ಸಮರಗಳಿಂದ ಬಲಹೀನಗೊಳಿಸುವ ಅಗತ್ಯವಿದೆ. ಇದಕ್ಕೆ ಕೇವಲ ಭಾರತದ ಸಂಪನ್ಮೂಲಗಳು ಸಾಲುವುದಿಲ್ಲ. ಫ್ರೆಂಚರ ಸಹಾಯದಿಂದ ನೀನು ಬ್ರಿಟಿಷರ ವಿರುದ್ಧ ವಿಜಯ ಸಾಧಿಸಬಲ್ಲೆ. ನಿನ್ನ ಹಲವಾರು ಧೈರ್ಯ-ಸಾಹಸಗಳಿಗೆ ನಾನು ಸಾಕ್ಷಿಯಾಗಿದ್ದೇನೆ. ಆದರೆ ಒಂದನ್ನು ನೆನಪಿಟ್ಟುಕೋ. ನಮ್ಮ ಧೈರ್ಯ-ಸಾಹಸಗಳು ನಮಗೆ ಒಂದು ಸಾಮ್ರಾಜ್ಯವನ್ನು ಗಳಿಸಿಕೊಡಬಲ್ಲವಾದರೂ, ಅದನ್ನು ಉಳಿಸಿಕೊಳ್ಳಲು ಅವು ಸಾಲುವುದಿಲ್ಲ. ಜನರ ತಾಳ್ಮೆಯಿಂದ ನಾವು ಒಂದು ಗದ್ದುಗೆ ಪಡೆಯಬಹುದಾದರೂ, ಸಾಧ್ಯವಾದಷ್ಟು ಬೇಗ ನಾವವರ ಪ್ರೀತಿ ವಿಶ್ವಾಸಗಳನ್ನು ಗೆಲ್ಲದೇ ಹೋದರೆ ಅದನ್ನು ಉಳಿಸಿಕೊಳ್ಳಲು ಆಗುವುದಿಲ್ಲ.”
ತಂದೆಯನ್ನು ಕಳೆದುಕೊಂಡ ಟಿಪ್ಪುವಿನಲ್ಲಿ ಬರೀ ದುಃಖವಿರಲಿಲ್ಲ. ತನ್ನ ತಂದೆ ಉಳಿಸಿಹೋದ ಸವಾಲನ್ನು ಪೂರ್ಣಗೊಳಿಸುವ ಛಲವಿತ್ತು. ಬ್ರಿಟಿಷ್ ಸಾಮ್ರಾಜ್ಯವನ್ನು ಕೊನೆಗೊಳಿಸಲೇಬೇಕೆಂಬ ಸಂಕಲ್ಪ ಬಹುಶಃ ಆಹೊತ್ತು ಧೃಡಗೊಂಡಿತು.
*(ಮುಂದುವರೆಯುವುದು*
*ಲಾಸ್ಟ್ ಬೆಂಚ್ ಜಲೀ....*
No comments:
Post a Comment