Saturday, November 11, 2017

*ಹುತಾತ್ಮ ಟಿಪ್ಪು ಸುಲ್ತಾನ್ ಸ್ವತಂತ್ರ್ಯ ಕರ್ನಾಟಕದ ಹರಿಕಾರ*

*✍🏻ಲಾಸ್ಟ್ ಬೆಂಚ್ ಜಲೀ...*

*ಸ್ವಾತಂತ್ರ್ಯ ಸಮರದ ಮಹಾ ದಂಡನಾಯಕ*

*ಟೇಬಲ್ ನಂ:2*
ತಂದೆಯನ್ನು ಕಳೆದುಕೊಂಡ ಟಿಪ್ಪುರವರಲ್ಲಿ ಕೇವಲ ದುಃಖವಿರಲಿಲ್ಲ. ತನ್ನ ತಂದೆ ಉಳಿಸಿಹೋದ ಸವಾಲನ್ನು ಪೂರ್ಣಗೊಳಿಸುವ ಛಲವಿತ್ತು. ಬ್ರಿಟಿಷ್ ಸಾಮ್ರಾಜ್ಯವನ್ನು ಕೊನೆಗೊಳಿಸಲೇಬೇಕೆಂಬ ಸಂಕಲ್ಪ ಬಹುಶ ಆ ಹೊತ್ತು ಧೃಡಗೊಂಡಿತು.
ಹೈದರಾಲಿ ಆಶಿಸಿದ್ದು ಕೇವಲ ಮೈಸೂರಿನ ಸ್ವಾತಂತ್ರ್ಯವನ್ನಲ್ಲ, ಬದಲಿಗೆ ಇಡೀ ಹಿಂದುಸ್ಥಾನದ ಸ್ವಾತಂತ್ರ್ಯವನ್ನು. ಹೀಗೆ ತಂದೆಯಿಂದ ಪಡೆದುಕೊಂಡಿದ್ದ, ವಸಾಹತುಶಾಹಿ-ವಿರೋಧಿ ದೃಷ್ಟಿಕೋನ ಹಾಗೂ ಬಲಪ್ರಯೋಗದಿಂದಲೇ ಜನರ ವಿಶ್ವಾಸ ಹಾಗೂ ಪ್ರೀತಿಯಿಂದ ಸಾಮ್ರಾಜ್ಯ ಕಟ್ಟುವ ಜನಪರ ತಿಳುವಳಿಕೆ ಟಿಪ್ಪುರವರಲ್ಲಿ ನಂತರ ಹೆಮ್ಮರವಾಗಿ ಬೆಳೆದವು. 1782ರ ನಂತರ ಮೈಸೂರು ಸಾಮ್ರಾಜ್ಯದ ಅಧಿಪತಿಯಾದ ಟಿಪ್ಪು ಮರಣ ಹೊಂದುವ ತನಕವೂ ಈ ಮೂಲ ಉದ್ದೇಶಗಳಿಂದ ಒಂದಿಷ್ಟೂ ವಿಚಲಿತರಾಗಲಿಲ್ಲ.
ಇದೀಗ ಟಿಪ್ಪು ಕೇವಲ ತಂದೆಯನ್ನು ಮಾತ್ರವಲ್ಲ, ದೇಶಪ್ರೇಮಿ, ಯುದ್ಧದ ಮಾರ್ಗದರ್ಶಕ, ಸೇನಾಧಿಪತಿ ಹಾಗೂ ಮುತ್ಸದ್ಧಿಯನ್ನೂ ಕಳೆದುಕೊಂಡು ಏಕಾಂಗಿಯಾಗಿದ್ದರು. ಆದರೆ ಹೈದರಾಲಿ ಸಾಯುವ ಮುನ್ನ ಟಿಪ್ಪುವಿಗೆ ಭಾರತವನ್ನು ವಸಾಹತುಶಾಹಿ ಆಕ್ರಮಣದಿಂದ ಉಳಿಸಲು ಬೇಕಿದ್ದ ದೇಶಪ್ರೇಮಿ ಸಮರದ ಪ್ರಣಾಳಿಕೆಯನ್ನು ಸಿದ್ಧಗೊಳಿಸಿಕೊಟ್ಟಿದ್ದ.
ಹೈದರ್ ಅಲಿ ಅದಿಕಾರಕ್ಕೆ ಬರುವ ಮೊದಲು 18ನೇ ಶತಮಾನದ ಭಾರತದ ರಾಜಕಾರಣ ಸಂಕ್ರಮಣ ಸ್ಥಿತಿಯಲ್ಲಿತ್ತು. ಮೊಗಲರ ಕೇಂದ್ರೀಯ ಆಳ್ವಿಕೆ ಕುಸಿದ ನಂತರ ಅಧೀನ ರಾಜಸಂಸ್ಥಾನಗಳು ಧಿಡೀರನೆ ಸ್ವಾತಂತ್ರ್ಯ ಘೋಷಿಸಿಕೊಂಡು ಪರಸ್ಪರ ಕಚ್ಚಾಡುತ್ತಿದ್ದವು. ದಕ್ಷಿಣದಲ್ಲೂ ಪ್ರಬಲಶಕ್ತಿಗಳಾದ ಮರಾಠರು, ಹೈದ್ರಾಬಾದಿನ ನಿಜಾಮ ಮೈಸೂರು ಸಂಸ್ಥಾನವನ್ನು ನುಂಗಲು ಕಾಯುತ್ತಿದ್ದರು.
ಈ ಪರಿಸ್ಥಿತಿಯ ಸಂಪೂರ್ಣ ಲಾಭ ಪಡೆದ ಬ್ರಿಟಿಷರು ತಮ್ಮ ಕುಖ್ಯಾತ “ಒಡೆದಾಳುವ ನೀತಿ”ಯಂತೆ ಒಂದು ರಾಜಸಂಸ್ಥಾನದ ವಿರುದ್ಧ ಮತ್ತೊಂದು ರಾಜಸಂಸ್ಥಾನಕ್ಕೆ ಸಹಾಯ ಮಾಡುತ್ತಾ ನಂತರ ಎರಡನ್ನೂ ಕಬಳಿಸುತ್ತಾ ತಮ್ಮ ಸಾಮ್ರಾಜ್ಯವನ್ನು ವಿಸ್ತರಣೆ ಮಾಡುತ್ತಾ ಮುಂದುವರಿದಿದ್ದರು. ಭಾರತದ ಮೇಲಿನ ಪರಮ ಸ್ವಾಮ್ಯಕ್ಕೆ ಬ್ರಿಟಿಷ್-ಫ್ರೆಂಚ್ ಈ ಎರಡು ಯೂರೋಪ್ ಶಕ್ತಿಗಳ ನಡುವೆ ಪೈಪೋಟಿ ನಡೆದಿತ್ತು. ಬ್ರಿಟಿಷರ ಕುಟಿಲ ರಾಜಕಾರಣ, ಉನ್ನತ ಸೈನಿಕ ಸಾಮಥ್ರ್ಯ ಹಾಗೂ ರಾಜಸಂಸ್ಥಾನಗಳ ಅನೈಕ್ಯಮತ್ಯ ಇವೆಲ್ಲವೂ 18ನೇ ಶತಮಾನದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ವಿಸ್ತರಣೆ ಹಾಗೂ ಈ ದೇಶದ ದಾಸ್ಯಕ್ಕೆ ದಾರಿ ಮಾಡಿಕೊಟ್ಟಿದ್ದವು.
ಇವುಗಳಷ್ಟೇ ಮುಖ್ಯವಾದ ಮತ್ತೊಂದು ಕಾರಣವೆಂದರೆ ಯಾವುದೇ ರಾಜಮನೆತನಗಳಿಗೆ ಜನಬೆಂಬಲ ಇಲ್ಲದಿದ್ದುದು. ಎಲ್ಲ ರಾಜಮನೆತನಗಳೂ ರೈತರ ರಕ್ತ ಹೀರುತ್ತಿದ್ದ ಅರಸೊತ್ತಿಗೆಗಳಾಗಿದ್ದವು. “ಯಾವ ಅರಸಬಂದರೂ ರಾಗಿ ಬೀಸೋದು ತಪ್ಪದ” ಜನ, ಈ ಯುದ್ಧಗಳಲ್ಲಿ ತಟಸ್ಥರಾಗಿ ಉಳಿದಿದ್ದು ಸಹ ಬ್ರಿಟಿಷ್ ವಿಜಯಕ್ಕೆ ಮತ್ತೊಂದು ಕಾರಣ ಒದಗಿಸಿತು.
ಇತ್ತ ಮೈಸೂರು ರಾಜ್ಯದಲ್ಲಿ; ಒಳಜಗಳ ಹಾಗೂ ಮಂತ್ರಿಗಳಾದ ನಂಜರಾಜ ಮತ್ತು ದೇವರಾಜರು ಅರಸನನ್ನು ಬದಿಗೊತ್ತಿ ಸಿಂಹಾಸನವನ್ನು ಆಕ್ರಮಿಸಲು ನಡೆಸುತ್ತಿದ್ದ ಕಿತ್ತಾಟದಿಂದ ಸಂಸ್ಥಾನ ಸತ್ವಹೀನವಾಗಿತ್ತು. ಸುತ್ತುವರೆದ ಶತ್ರುಗಳು ಮೈಸೂರನ್ನು ನುಂಗಲು ಹೊಂಚು ಹಾಕಿದ್ದರು. ಆಗ ಒಂದು ಸೇನಾ ತುಕಡಿಯ ಮುಖ್ಯಸ್ಥನಾಗಿದ್ದ ಹೈದರಾಲಿ ಅಂತಹ ಆಪತ್ತಿನಿಂದ ಸಂಸ್ಥಾನವನ್ನು ಉಳಿಸಿದರು. ಇದಕ್ಕೆ ಮೆಚ್ಚುಗೆಯಾಗಿ ಹೈದರ್ ಬಡ್ತಿಗೊಂಡು ಸೇನಾ ದಂಡನಾಯಕನಾದರು. ಕೊನೆಗೆ ತಾನೇ ಖುದ್ದು ದೇವರಾಜ, ಲಿಂಗರಾಜರ ನಡುವೆ ಮೈತ್ರಿ ಏರ್ಪಡಿಸಿದರು. ಆದರೆ ಆನಂತರ ನಂಜರಾಜ ತೀರಿಕೊಂಡ. ದೇವರಾಜ ನಿವೃತ್ತಿಯಾದ. ಇಂತಹ ಸಂದರ್ಭದಲ್ಲಿ ಮೈಸೂರು ಅರಸುವಂಶದ ಒಳಜಗಳದಿಂದ ಉಂಟಾದ ಅರಾಜಕ ಪರಿಸ್ಥಿತಿಯನ್ನು ಬಳಸಿಕೊಂಡು ಮೈಸೂರನ್ನು ನುಂಗಲು ಬಂದ ಮರಾಠರಿಂದ ಮೈಸೂರು ರಾಜ್ಯವನ್ನು ರಕ್ಷಿಸುವ ಜವಾಬ್ದಾರಿ ಹೈದರನ ಪಾಲಿನದಾಯಿತು. ರಾಜಖಡ್ಗ ಹಿಡಿದ ಮರುಕ್ಷಣದಿಂದಲೇ ಹೈದರಾಲಿ ಆ ಖಡ್ಗವನ್ನು ಒಂದೆಡೆ ದೇಶವನ್ನೇ ಆಕ್ರಮಿಸುತ್ತಾ ಬರುತ್ತಿದ್ದ ಬ್ರಿಟಿಷರ ವಿರುದ್ಧವೂ, ಮತ್ತೊಂದೆಡೆ ಜನಕಂಟಕರಾಗಿದ್ದ ಪಾಳೆಗಾರರ ವಿರುದ್ಧವೂ ಬೀಸಲಾರಂಭಿಸಿದ. ಇದರಿಂದಾಗಿ ಒಂದೆಡೆ ಹಳ್ಳಿಯಲ್ಲಿ ರೈತರನ್ನು ಲೂಟಿ ಹೊಡೆದು ಸುಲಿಯುತ್ತಿದ್ದ ಪಾಳೆಗಾರರ ಕಾಟದಿಂದ ರೈತರು ಬಿಡುಗಡೆ ಪಡೆದರು. ಹೈದರಾಲಿ ರೈತ ಮಕ್ಕಳನ್ನು ಸೇರಿಸಿಕೊಂಡು ಸೈನ್ಯವನ್ನು ಬೃಹತ್ ಮಟ್ಟದಲ್ಲಿ ವಿಸ್ತರಿಸಿದ. ಬ್ರಿಟಿಷರನ್ನು ಈ ದೇಶದ ಪ್ರಥಮ ಶತ್ರುಗಳೆಂದು ಪರಿಗಣಿಸಿದ.
                    *(Continues...)*

ಪ್ರಿಯರೇ ಪರ-ವಿರೋಧಗಳಿಂದ ಹೊರತಾದ ಟಿಪ್ಪು ಸುಲ್ತಾನ್ ಕುರಿತ ವಾಸ್ತವ ಸಂಗತಿಗಳನ್ನು ತಿಳಿಸುವ ಬರೆಹ ಇದಾಗಿದೆ. ಟಿಪ್ಪುಸುಲ್ತಾನ್ ಜಯಂತಿಯನ್ನು ಮತೀಯ ನೆಲೆಯಲ್ಲಿ ವಿರೋಧಿಸಲಾಗುತ್ತಿರುವ ಸಂದರ್ಭದಲ್ಲಿ ಸತ್ಯವನ್ನು ಮುನ್ನೆಲೆಗೆ ತರಲು ಬಯಸುವ
ಚರ್ಚೆಯಲ್ಲಿ ನೆರವಾಗುವ ಉದ್ದೇಶದಿಂದ ಈ ಬರೆಹವನ್ನು ಕಳುಹಿಸುತ್ತಿದ್ದೇವೆ.

ಸಹಕಾರ: ಸಮಾಜವಿಜ್ಞಾನ ಅಧ್ಯಯನ ಸಂಸ್ಥೆ

           *ಲಾಸ್ಟ್ ಬೆಂಚ್ ಜಲೀ....*

No comments:

Post a Comment