Saturday, October 14, 2017

*ಬದುಕಿರುವಾಗ ಅವುಲಿಯಾಗಳಲ್ಲಿ ಬೇಡದೆ ಅವರ ಮರಣ ನಂತರ ಅವರ ದರ್ಗಾ ಬಳಿ ಬೇಡುವುದು ಸರಿಯೇ?*

*------------------*

ಓಡೋಡಿ ಬಂದ ಅದ್ರಾಮಾಕ ಎದೆಯುಸಿರು ಬಿಡುತ್ತಾ ಅಂಗಡಿ ಮುಂದೆ ಅರಚುತ್ತಿದ್ದರು!
ಎಲ್ಲರೂ ಡೋಂಗಿ,ಸುಳ್ಳು ಸುಳ್ಳು..
ಅವ್ರು ಹೇಳುವುದೇ ಸರಿ...
ನಾನು ಇದುವರೆಗೂ ಅವ್ರ ಕ್ಲಾಸ್ ಕೇಳಲೇ ಇಲ್ಲ.
ನಿನ್ನೆ ಸ್ವಲ್ಪ ಪುರುಸೊತ್ತು ಮಾಡಿ ಹೋದೆ..., ಕೇಳಿದೆ...
ಅವ್ರು ಹೇಳುವುದರಲ್ಲಿ ಸತ್ಯ ಇದೆ.
ನಮ್ಮವ್ರು ನಮ್ಮನ್ನು ಇಷ್ಟ್ರವರೆಗೂ ವಂಚಿಸುತ್ತಾ ಇದ್ದರು.
ಒಂದೇ ಸಮನೆ ಅದ್ರಮಾಕ ಕಿರುಚುತ್ತಿದ್ದರು!
ಗೂಡಂಗಡಿಯ ಒಳಗಿದ್ದು ಎಲ್ಲಾ ಕೇಳಿಸಿಕೊಂಡ ಪುತ್ತನ ಪಿತ್ತ ನೆತ್ತಿಗೇರಿತ್ತು!
ಆದರೂ ಸಬೂರು ಮಾಡಿಕುಳಿತ.
ಅದ್ರಾಮಾಕ ಮತ್ತೂ ಕಿರುಚಲು ಆರಂಭಿಸಿದರು.
ಸುಮ್ ಸುಮ್ನೆ ಮುಸ್ಲಿಯಾರ್ ಗಳು ಜೇಬು ತುಂಬಿಸಲು ಮಾಡುವ ಕೆಲಸವಂತೆ!
ಇಸ್ಲಾಮಿನಲ್ಲಿ ಉರೂಸ್ ದರ್ಗಾ ಏನೂ ಇಲ್ಲವಂತೆ.
ಅವುಲಿಯಾಗಳ ಬದುಕಿರುವಾಗ ಅವರಲ್ಲಿ ಕೇಳದೆ ಅಲ್ಲಾಹನಲ್ಲಿ ಬೇಡುತ್ತಾರೆ.ಅವರು ಮರಣ ಹೊಂದಿದ ಕೂಡಲೇ ಚಾದರ ಹಾಸಿ ದರ್ಗಾ ಮಾಡಿ ಅವರಲ್ಲೇ ಕೇಳಲು ಆರಂಭಿಸುತ್ತಾರೆ!
ಇದೆಂತಾ ವಿಪರ್ಯಾಸ!
ಈವಾಗ ಪುತ್ತನ ಸಬೂರು ಸಂಪೂರ್ಣ ಖಾಲಿಯಾಗಿತ್ತು.
ಗೂಡಂಗಡಿಯ ಹೊರಗೆ ತಲೆ ಇಣುಕಿಸಿದವನೇ ಕೇಳಿದ,
ಅಲ್ಲ, ಅದ್ರಾಮಾಕ, ನೀವು ಯಾರ ವಿಷಯ ಹೇಳುತ್ತಿರುವುದು?
ಏನಾಗಿದೆ ನಿಮಗೆ?
ಯಾಕಾಗಿ ಅರಚುತ್ತಿದ್ದೀರಿ?
ಮುಸ್ಲಿಯಾರ್ ಗಳ ಜೇಬು ತುಂಬಲು ಅವರ ಆಡಳಿತದಲ್ಲಿ ನಡೆಯುವ ಉರೂಸ್ ಯಾವುದು?
ಉಳ್ಳಾಲ ಉರೂಸು ನಡೆಸುವುದು ಮುಸ್ಲಿಯಾರ್ ಗಳಾ?
ಅಲ್ಲಿ ಸಂಗ್ರಹವಾಗುವ ಹಣವೆಲ್ಲಾ ಮುಸ್ಲಿಯಾರ್ ಗಳ ಜೇಬು ತುಂಬುತ್ತದಾ?
ಅಲ್ಲಿನ ಆಡಳಿತದಲ್ಲಿ ಎಷ್ಟು ಮುಸ್ಲಿಯಾರ್ ಗಳು ಇದ್ದಾರೆ?
ಹೋಗಲಿ...
ಕಾಜೂರು ಉರೂಸ್ ಯಾರು ನಡೆಸುವುದು ಮುಸ್ಲಿಯಾರ್ ಗಳಾ?
ಪೊಯ್ಯತಬೈಲ್ ಮಣವಾಟಿ ಉರೂಸ್ ಕಮಿಟಿಯ ಅದ್ಯಕ್ಷರು, ಸದಸ್ಯರು ಎಲ್ಲರೂ ಮುಸ್ಲಿಯಾರ್ ಗಳಾ?
ಹೀಗೆ ಪಟ್ಟಿ ಮಾಡಿದರೆ,ಕಾಸರಗೋಡು ಮಾಲಿಕ್ ದೀನಾರ್,ಇಚಿಲಂಗೋಡು,ನೆಲ್ಲಿಕುನ್ನು,ಮಂಬುರಂ,ಮಡವೂರು,ಪಾರಪಳ್ಳಿ ಮುತ್ತುಪೇಟ,ನಾಗೂರು ಸಾಣೂರು,ಏರ್ವಾಡಿ ಮುಂತಾದ ನೂರಾರು ದರ್ಗಾಗಳ ಆಡಳಿತ ಮುಸ್ಲಿಯಾರ್ ಗಳ ಕೈಯಲ್ಲಾ?
ನಿಮ್ಮ ವಿಷಯ ಕೇಳಿದರೆ ನಾಡಿನ ಎಲ್ಲಾ ದರ್ಗಾಗಳ ಕೀಲಿ ಕೈ ಹಾಗೂ ಅಲ್ಲಿನ ಆಡಳಿತ ಅಲ್ಲಿ ಸಂಗ್ರಹವಾಗುವ ಹಣ ಎಲ್ಲವೂ ಮುಸ್ಲಿಯಾರ್ ಗಳ ಜೇಬಿಗೆ ಸೇರುತ್ತದೆಯಾದರೆ,ಅವರೇಕೆ ಈಗಲೂ ಪುಡಿಗಾಸು ಸಂಬಳಕ್ಕೆ ಮಸೀದಿ ಮದರಸದಲ್ಲಿ ಸೇವೆಗೆಯ್ಯುತ್ತಿರುವುದು?
ಮನೆ ಕಟ್ಟಲು,ಮಗಳ ವಿವಾಹ ಮಾಡಿಕೊಡಲು ಪಳ್ಳಿ ಪಳ್ಳಿ ಅರ್ಜಿ ಹಾಕುವ ಗತಿ ಯಾಕೆ ಬಂತು?
ಪುತ್ತು ಪಟಪಟನೆ ಕೇಳಿದಾಗ ಅದ್ರಾಮಕನ ಧ್ವನಿ ಇದೀಗ ತಣ್ಣಗಾಯಿತು.
ಅದ್ರಮಾಕ ಉತ್ತರವಿಲ್ಲದೆ ತಡಕಾಡಿದರು.
ಪುತ್ತು ಕೇಳಿಯೇ ಬಿಟ್ಟ ಜಾಹಿಲ್ ಗಳಾದ ನನಗೂ ನಿಮಗೂ ಯಾಕೆ ಆ ಸಳಪಿಯ ಕ್ಲಾಸ್ ಕೇಳಲು ಹೋಗಬೇಕು?
ನಮ್ಮ ಪಳ್ಳಿಯ ಖತೀಬ್ ಉಸ್ತಾದ್ ಅಷ್ಟೊಂದು ಸವಿಸ್ತಾರವಾಗಿ ದೀನಿನ ಕಾರ್ಯ ದಿನನಿತ್ಯ ಸುಬುಹಿ ನಮಾಜಿನ ನಂತರ ವಿವರಿಸುವಾಗ ನಾವೇಕೆ ಆ ಸುಳ್ಳು ಹೇಳಿ ವಂಚಿಸುವ ಸಳಪಿಗಳ ತರಗತಿ ಆಲಿಸಲು ಹೋಗಬೇಕು?

ಅದ್ರಾಮಕ ಎಲ್ಲವೂ ಸರಿ ಎಂಬಂತೆ ತಲೆ ಅಲ್ಲಾಡಿಸಿ ಏನೋ ಯೋಚಿಸಲು ಆರಂಭಿಸಿದರು.
ಇದನ್ನು ಮನಗಂಡ ಪುತ್ತು ಕೇಳಿದ ಅಲ್ಲ, ಅದ್ರಮಾಕ ನೀವೇನು ಯೋಚಿಸುತ್ತಿರುವುದು?
ಇನ್ನೂ ಡೌಟ್ ಮುಗಿಯಲಿಲ್ಲವಾ?

ತಟ್ಟನೆ ಅದ್ರಾಮಕ ಹೇಳಿದರು.
ಇದಳಾ ಪುತ್ತು ನಕ್ಕ್ ಒರೇ ಡೌಟ್,

ಎಂದ್ರೆ ಡೌಟ್?

ಪುತ್ತು ಕೇಳಿದ,

ಅದ್ರಮಾಕ ವಿವರಿಸಿದರು..
ಇದೀಗ ನಾವು ಎಪಿ ಉಸ್ತಾದರನ್ನು .ಅವರೊಬ್ಬ ಆಲಿಮ್ ಎಂಬ ರೀತಿಯಲ್ಲಿ ಗೌರವಿಸುತ್ತೇವೆ.
ಆದರೆ ಅವರಲ್ಲಿ ನಾವು ಏನನ್ನೂ ಬೇಡುವುದಿಲ್ಲ. ಎಲ್ಲವೂ ಅಲ್ಲಾಹನಲ್ಲಿ ಬೇಡುತ್ತೇವೆ.

ಒಂದು ವೇಳೆ ಅವರು ಮರಣ ಹೊಂದಿದರೆ ಕೂಡಲೇ ಅವರ ದರ್ಗಾ ಕಟ್ಟಿ ಅವರಲ್ಲೇ ಬೇಡಲು ಆರಂಭಿಸುತ್ತೇವೆ!
ಅದೇಕೆ ಅವರು ಬದುಕಿರುವಾಗ ನಾವು ಅವರಲ್ಲಿ ಡೈರಕ್ಟ್ ಬೇಡುವುದಿಲ್ಲ?
ಈ ಒಂದು ಪ್ರಶ್ನೆ ಸಳಪಿ ಮೌಲವಿ ನಮ್ಮೆಲ್ಲರಲ್ಲಿ ಕೇಳಿದ್ದ.
ನನಗೂ ಅದು ಸರಿ ಅನಿಸಿತ್ತು.ಅದರ ಉತ್ತರ ಏನಾಗಿರಬಹುದೆಂದು ಆಲೋಚಿಸುತ್ತಾ ಇದ್ದೇನೆ.

ಕೂಡಲೇ ಪುತ್ತು ಗೂಡಂಗಡಿಯ ಹೊರಗೆ ಬಂದು ಅಲ್ಲೇ ಇದ್ದ ಮರದ ಬೆಂಚಿನಲ್ಲಿ ಕುಳಿತು ಹೇಳಿದ,

ಯಾರು ಹೇಳಿದ್ದು ಎಪಿ ಉಸ್ತಾದ್ ಬದುಕಿರುವಾಗ ಅವರಲ್ಲಿ ಯಾರೂ ಏನೂ ಬೇಡುವುದಿಲ್ಲವೆಂದು...,

ನನಗೊತ್ತು ಅದೆಷ್ಟೋ ದಂಪತಿಗಳು ತಮಗೆ ಮಕ್ಕಳಿಲ್ಲ ಎಂಬ ಕೊರಗು ಹೇಳಿ ಉಸ್ತಾದರಲ್ಲಿ ಬೇಡಿದಾಗ ಇನ್ಶಾಅಲ್ಲಾ ಮುಂದಿನ ರಬೀವುಲ್ ಅವ್ವಲ್ ತಿಂಗಳು ಶುಕ್ರವಾರ ನಿಮಗೊಂದು ಗಂಡು ಮಗು ಜನಿಸಲಿ ಎಂದು ಆಶಿರ್ವಾದಿಸಿ ದುಆ ಮಾಡುತ್ತಾರೆ,
ಅವರ ದುಆ ಕ್ಕೆ ಅಲ್ಲಾಹು ಉತ್ತರ ಕೊಟ್ಟ ಅದೆಷ್ಟೋ ನಿದರ್ಶನಗಳಿವೆ.

ಮಳೆ ಇಲ್ಲದೆ ಬರಡು ಅನುಭವಿಸಿದಾಗ ಜನರು ಮಳೆಗಾಗಿ ಪ್ರಾರ್ಥಿಸಲು ಎಪಿ ಉಸ್ತಾದರಲ್ಲಿ ಬೇಡಿದಾಗ,ಉಸ್ತಾದ್ ದುಆ ಮಾಡಿದ ತಕ್ಷಣ ದಾರಾಕವಾಗಿ ಮಳೆ ಸುರಿದ ಅನುಭವ ತಾಜಾವಾಗಿ ನಮ್ಮ ಮುಂದಿದೆ.

ಸಮುದ್ರದಲ್ಲಿ ಮೀನು ಸಿಗದೆ ಇರುವಾಗ ಬೆಸ್ತರು ಮರ್ಕಝ್ ಗೆ ಬಂದು ಎಪಿ ಉಸ್ತಾದರಲ್ಲಿ ತಮ್ಮ ಕಷ್ಟ ನೀಗಲಿಕ್ಕಾಗಿ ಬೇಡುವರು.
ಆವಾಗ ಉಸ್ತಾದ್ ಪ್ರಾರ್ಥಿಸುವರು ಮೀನು ದಾರಾಳ ಸಿಕ್ಕಿದ ಅನುಭವ ತೀರಪ್ರದೇಶದ ಜನರು ಸ್ಮರಿಸುತ್ತಿರುತ್ತಾರೆ.
ಪುತ್ತ ಹೇಳುತ್ತಲೇ ಇರುವಾಗ ಅದ್ರಮಾಕ ಮದ್ಯೆ ಪ್ರವೇಶಿಸಿ ಹೇಳಿದರು.
ಅದು ಎಪಿ ಉಸ್ತಾದರಲ್ಲಿ ಬೇಡುವುದು ಅಲ್ಲ, ದುಆ ಮಾಡಲಿಕ್ಕೆ ಹೇಳುವುದಲ್ಲವೇ!?

ತಟ್ಟನೆ ಪುತ್ತು ಕೇಳಿದ ಯಾಕೆ ಎಪಿ ಉಸ್ತಾದರಲ್ಲಿ ದುಆ ಮಾಡಲು ಹೇಳಬೇಕು ಡೈರಕ್ಟ್ ಅಲ್ಲಾಹನಲ್ಲಿ ಬೇಡಬಹುದಲ್ಲ?
ಅವರೇಕೆ ಎಪಿ ಉಸ್ತಾದರ ಬಳಿ ಬರುವುದು?

ಪುತ್ತುವಿನ ಪ್ರಶ್ನೆಯಿಂದ ಗಲಿಬಿಲಿಗೊಂಡ ಅದ್ರಮಾಕ ಹೇಳಿದರು
ಅದು., ಉಸ್ತಾದ್ ಒಬ್ಬ ಆಲಿಂ ತಾನೆ?
ಅವರ ದುಆ ಕ್ಕೆ ಉತ್ತರ ಬಲುಬೇಗನೆ ಸಿಗುತ್ತೆ ಹಾಗಾಗಿ ಬರುತ್ತಾರೆ.

ಇದು ಹೇಳಿದ ತಕ್ಷಣ ಪುತ್ತು ಪ್ರತಿಕ್ರಯಿಸಿದ..

ಹೌದು....

ಅವುಲಿಯಾಗಳ,ಆಲಿಮ್ ಗಳ ದುಆ ಕ್ಕೆ ಉತ್ತರ ಬೇಗ ದೊರೆಯುತ್ತದೆ.
ಅವರು ಮರಣ ಹೊಂದಿದರೂ ಆ ಪವರ್ ಇರುತ್ತದೆ.
ದುನಿಯಾದ ಅವಸ್ಥೆ ಕ್ಕಿಂತ ಭಿನ್ನವಾಗಿ ಬರ್ಝಖಿ ಬದುಕು ತುಂಬಾ ಶಾರ್ಪ್ ಆಗಿರುತ್ತದೆ.

ಹಾಗಾಗಿ ಉತ್ತರ ಬೇಗ ಸಿಗುತ್ತದೆ.
ಕೊಡುವವನು ಅಲ್ಲಾಹು..
ಎಪಿ ಉಸ್ತಾದ್ ಅಲ್ಲ., ಮುತ್ತು ರಸೂಲ್ ಸಲ್ಲಲ್ಲಾಹು ಅಲೈಹಿವಸಲ್ಲಂ ತಂಙಳ್ ರಿಗೂ ಸ್ವಂತವಾಗಿ ಯಾವುದೇ ಅಧಿಕಾರ ಇಲ್ಲ ಎಲ್ಲವೂ ಅಲ್ಲಾಹು ನೀಡುವ ಕೊಡುಗೆ.

ಆದರೆ ಮಹಾತ್ಮರು ಬೇಡುವಾಗ ಅಲ್ಲಾಹು ಬೇಗ ಉತ್ತರಿಸುವನು.
ಹಾಗಾಗಿ ಅವರ ಬಳಿ ಬದುಕಿರುವಾಗ ಹೋಗುವಂತೆ ಮರಣದ ನಂತರವೂ ಜನರು ಹೋಗುತ್ತಾರೆ.

ಹರಿತವಾದ ಖಡ್ಗ ಅದರ ಹೊದಿಕೆಯಿಂದ ಹೊರತೆಗೆದರೆ ಮತ್ತಷ್ಟು ಪಳಪಳ ಹೊಳಪು ಬರುವ ಹಾಗೆ ಆಲಿಂಗಳ ಅವುಲಿಯಾಗಳ ರೂಹ್ ದೇಹದಿಂದ ನಿರ್ಗಮಿಸಿದಾಗ ಮತ್ತಷ್ಟು ಶಾರ್ಪ್ ಆಗುತ್ತದೆ!
ಆದ್ದರಿಂದಲೇ ಅವರು ಮರಣ ಹೊಂದಿದ ಕೂಡಲೇ ಕರಾಮತ್ ಪ್ರಕಟವಾಗುತ್ತದೆ.ಅವರ ಝಿಯಾರತ್ ಉದ್ದೇಶಿಸಿ ಬರುವವರ ಸೌಕರ್ಯಕ್ಕಾಗಿ ಕಟ್ಟಡ ಕಟ್ಟುತ್ತೇವೆ.ಅದನ್ನು ನಾವು ದರ್ಗಾ ಎಂದು ಕರೆಯುತ್ತೇವೆ.ನಮ್ಮ ಸಮಸ್ಯೆಗಳನ್ನು ಅವರ ಮುಂದಿಡುವಾಗ ಅಷ್ಟೇ ಶಾರ್ಪಾಗಿ ಅವರು ಪ್ರತಿಕ್ರಯಿಸುತ್ತಾರೆ.
ಅದು ಅಲ್ಲಾಹನು ಅವರಿಗೆ ನೀಡುವ ಮಹಾ ಕೊಡುಗೆ!
ಅದನ್ನು ನಿಷೇಧಿಸುವುದು ಅಲ್ಲಾಹನ ಕೊಡುಗೆಯನ್ನು ನಿಷೇಧಿಸಿದಂತೆ!
ಮುರ್ತದ್ದಾಗುವ ಅಪಾಯವಿದೆ!
ಜೋಕೆ!!

ಇದೀಗ ಅದ್ರಮಾಕನ ಡೌಟು ಫುಲ್ ನೀಗಿತ್ತು.

 ಅದ್ರಮಾಕ ಸಂತೋಷದಿಂದ ಪುತ್ತನನ್ನು ಆಲಂಗಿಸಿ,ಇನ್ನೆಂದೂ ಆ ಬಿಕ್ನಾಸಿ ಸಳಪಿಗಳ ಕ್ಲಾಸ್ ಆಲಿಸಲು ಹೋಗಲಾರೆ ಎಂದು ಶಫಥ ಹಾಕಿ ತನ್ನ ಚೀಲವನ್ನು ತೋಳಿಗೆ ಹಾಕಿ ಮನೆ ಕಡೆ ಹೆಜ್ಜೆ ಹಾಕಿದರು.
- ಅಬೂಶಝ

No comments:

Post a Comment